ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಮೈಸೂರಿನಿಂದಲೇ ನನ್ನ ಮೂರನೇ ಚಿತ್ರ ‘ಮುಗಿಲ್ಪೇಟೆ’ ಪ್ರಚಾರ ಆರಂಭಿಸಿದ್ದೇನೆ ಎಂದು ಚಿತ್ರದ ನಾಯಕ ನಟ, ರವಿಚಂದ್ರನ್ ಪುತ್ರ ಮನೋರಂಜನ್ ತಿಳಿಸಿದರು.
``ಚಿತ್ರ ಅದ್ಧೂರಿಯಾಗಿ ಮೂಡಿ ಬಂದಿದೆ. ಪ್ರೇಮ, ಕೌಟುಂಬಿಕ, ಭಾವನಾತ್ಮಕ ಸೇರಿದಂತೆ ಎಲ್ಲಾ ಆಯಾಮಗಳನ್ನೂ ಒಳಗೊಂಡಿದೆ. ಚಿತ್ರ ಮುಂದಿನ ವಾರ ತೆರೆಗೆ ಬರುತ್ತಿದೆ. ಅಪ್ಪನ ಮಾರ್ಗದರ್ಶನದಂತೆ ಮೈಸೂರಿನಿಂದ ಪ್ರಚಾರ ಆರಂಭಿಸಲಾಗಿದೆ,``ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
``ನಾಯಕಿಯಾಗಿ ಕಯಾದು ಲೋಹರ್ ನಟಿಸಿದ್ದುಘಿ, ರಿಷಿ, ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು ಹೀಗೆ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ. ರವಿವರ್ಮ ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಡಾ.ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಹರ್ಷ, ಮುರಳಿ, ಮೋಹನ್ ನೃತ್ಯ ನಿರ್ದೇಶನ ಹಾಗೂ ಸತೀಶ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರವನ್ನು ಮೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ಕುಮಾರ್ ನಿರ್ಮಿಸಿದ್ದಾರೆ,`` ಎಂದು ಮಾಹಿತಿ ನೀಡಿದರು.
ಹಾಡು ಬಿಡುಗಡೆ: ಚಿತ್ರದ ಎರಡನೇ ಹಾಡನ್ನು ನಗರದ ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಂದಲೇ ಬಿಡುಗಡೆ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಮನೋರಂಜನ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ವಿದ್ಯಾರ್ಥಿನಿಯರು ಮುಗಿಬಿದ್ದರು. ಬಳಿಕ ಮಹಾರಾಜ ಹಾಗೂ ಯುವರಾಜ ಕಾಲೇಜಿನಲ್ಲೂ ಚಿತ್ರದ ಪ್ರಚಾರವನ್ನು ನಾಯಕ ನಟ ಕೈಗೊಂಡರು. ಚಿತ್ರ ತಂಡದ ರಾಜು ವೈವಿದ್ಯ ಇದ್ದರು.