ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್ ರಾಜ್ ಅವರ ನಿರ್ಮಾಣದ , ಆಸ್ಕರ್ ಕೃಷ್ಣ ನಿರ್ದೇಶನದ ``ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ`` ಚಿತ್ರವು ಇದೇ ತಿಂಗಳಲ್ಲಿ ಜಗತ್ತಿನಾದ್ಯಂತ ತೆರೆಕಾಣಲಿದೆ. ಕೋವಿಡ್ ಮಹಾಮಾರಿ ಯಿಂದ ತತ್ತರಿಸಿದ್ದ ಚಿತ್ರರಂಗ ಇದೀಗ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಾ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಚಿತ್ರಮಂದಿರಗಳು ಚಿತ್ರರಸಿಕರನ್ನು ರಂಜಿಸಲು ಬಾಗಿಲು ತೆರೆಯತೊಡಗಿವೆ. ಇದಕ್ಕೆ ಮೊದಲು ಹಲವಾರು ಚಿತ್ರಗಳು ಲಾಕ್ಡೌನ್ ಪರಿಸ್ಥಿತಿಯಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣದೇ, ಒ.ಟಿ.ಟಿ ಹಾಗೂ ಇನ್ನಿತರ ವೇದಿಕೆಗಳ ಮೂಲಕ ಬಿಡುಗಡೆಯಾಗಿದ್ದರೂ ಸಹ ನಿರ್ದೇಶಕ ಆಸ್ಕರ್ ಕೃಷ್ಣ ಚಿತ್ರಮಂದಿರದಲ್ಲಿಯೇ ತಮ್ಮ ಚಿತ್ರ ಬಿಡುಗಡೆ ಮಾಡಬೇಕು ಎಂದು ಕಾದಿದ್ದರು. ``ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ`` ಚಿತ್ರವು ಆಗಸ್ಟ್ ತಿಂಗಳಲ್ಲಿ ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಜೋಗಿ ಸುನಿತಾ ಮತ್ತಿತರರು ಧನಿ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಜನರ ಮನಸೂರೆಗೊಂಡಿದ್ದು, ಚಿತ್ರವೂ ಕೂಡ ಚಿತ್ರರಸಿಕರಿಗೆ ರಂಜಿಸಲಿದೆ ಎಂದು ನಿರ್ಮಾಪಕ ಸೆವೆನ್ ರಾಜ್ ಹೇಳಿದ್ದಾರೆ.
ಆಸ್ಕರ್ ಕೃಷ್ಣ, ಲೋಕೇಂದ್ರ ಸೂರ್ಯ, ಗೌರಿ ನಾಯರ್ ಜೊತೆಗೆ ನಿರ್ಮಾಪಕ ಸೆವೆನ್ ರಾಜ್ ಕೂಡ ಒಂದು ಬಹುಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಅನಂತ್ ಆರ್ಯನ್ ಸಂಗೀತ, ಗಗನ್ ಕುಮಾರ್ ಛಾಯಾಗ್ರಹಣ, ಮರಿಸ್ವಾಮಿ ಸಂಕಲನ, ಅಕುಲ್ ನೃತ್ಯ ಹಾಗೂ ವೈಲೆಂಟ್ ವೇಲು ಸಾಹಸ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.