ಗಂಡ ಹೆಂಡತಿ ನಡುವೆ ಪರಸ್ಪರ ನಂಬಿಕೆ, ಹೊಂದಾಣಿಕೆ ಇರಬೇಕು. ಆಗಲೇ ಜೀವನ ಸುಖಮಯ ಎಂಬ ಅಂಶದ ಮೇಲೆ ಹಾಸ್ಯಮಿಶ್ರಿತ ಕಥಾಹಂದರ ಹೆಣೆಯಲಾಗಿರುವ ಚಿತ್ರ ಶ್ರೀರಾಮ ಅಲ್ಲ ಶ್ರೀ ಕೃಷ್ಣ. ಶ್ರೀ ಸುಮನ್ ವೆಂಕಟಾದ್ರಿ ಪ್ರೊಡಕ್ಷನ್ಸ್ ಆಡಿಯಲ್ಲಿ ಸಿ.ಹೆಚ್.ಸುಮನ್ ಬಾಬು ಅವರು ನಿರ್ಮಾಣದ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿರುವ ಚಿತ್ರ ಇದಾಗಿದ್ದು, ಈ ಚಿತ್ರದ ಸ್ಕ್ರಿಪ್ಟ್ ಪೂಜೆ ರಾಜಾಜಿನಗರದ ಶ್ರೀ ಗಣಪತಿ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿತು. ಈ ಚಿತ್ರದಲ್ಲಿ ನಿರ್ಮಾಪಕರಾದ ಸುಮನ್ ಬಾಬು ಅವರೇ ನಾಯಕನಾಗಿಯೂ ಸಹ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಪ್ರಮುಖ ನಾಯಕಿ ಪಾತ್ರದಲ್ಲಿ ನಟಿಸುವವರನ್ನು ಗುಟ್ಟಾಗಿಯೇ ಇಟ್ಟಿರುವ ಚಿತ್ರತಂಡ ಸದ್ಯದಲ್ಲೇ ಫೈನಲ್ ಮಾಡಲಿದೆ.
ಮುಂದಿನ ತಿಂಗಳು ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗುತ್ತಿದ್ದು, ಬಹುತೇಕ ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸುವ ಯೋಜನೆಯನ್ನು ನಿರ್ಮಾಪಕರು ಹಾಕಿ ಕೊಂಡಿದ್ದಾರೆ.
ಗಂಡ ಹೆಂಡತಿ ಸಂಬಂಧ ಹೇಗಿರಬೇಕೆಂಬುದನ್ನು ಒಂದೊಳ್ಳೆ ಕಂಟೆಂಟ್ ಜೊತೆಗೆ ಮೆಸೇಜ್ ಇಟ್ಟುಕೊಂಡು ಕಾಮಿಡಿಯಾಗಿ ಹೇಳಲು ಪ್ರಯತ್ನಿಸಿರುವ ನಿರ್ದೇಶಕರು ಕಥೆಗೆ ತಕ್ಕಂತೆ ೫ ಹಾಡುಗಳನ್ನು ಚಿತ್ರದಲ್ಲಿಟ್ಟಿದ್ದಾರೆ. ಚಿತ್ರಕ್ಕೆ ಮಹೇಶ್ ರಾಜು ಸಂಗೀತ ಸಂಯೋಜನೆ ಮಾಡಿದ್ದಾರೆ. ಜಿವಿ ರಮೇಶ್ ಕ್ಯಾಮೆರಾವರ್ಕ್ ನಿಭಾಯಿಸಿದ್ದಾರೆ. ಅಲ್ಲದೆ ಚಿತ್ರದಲ್ಲಿ ಮೂರು ಸಾಹಸದೃಶ್ಯಗಳನ್ನು ಚಂದ್ರು ಬಂಡೆ ಮಾಡುತ್ತಿದ್ದಾರೆ.ನೃತ್ಯ ಅಕುಲ್ ಎನ್. ಮುರಳಿ ಜೆ. ಅವರು ಚಿತ್ರದ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಅಲ್ಲದೆ ಚಿಕ್ಕ ಪಾತ್ರವನ್ನೂ ಸಹ ನಿರ್ವಹಿಸುತ್ತಿದ್ದಾರೆ.