ಈ ಹಿಂದೆ ಗಡಿಯಾರ ಎಂಬ ವಿಭಿನ್ನ ಜಾನರ್ ಚಿತ್ರ ನಿರ್ದೇಶಿಸಿದ್ದ ಪ್ರಭಿಕ್ ಮೊಗವೀರ್ ನಿರ್ಮಾಣದ, ತನಿಖೆ ಖ್ಯಾತಿಯ ಕಲಿಗೌಡ ಅವರ ನಿರ್ದೇಶನದ ನಾಯಿ ಇದೆ ಎಚ್ಚರಿಕೆ ಎನ್ನುವ ವಿಶೇಷ ಚಿತ್ರ ಸೆಟ್ಟೇರಿದೆ. ನಾಯಿಯೊಂದರ ಹಿನ್ನೆಲೆಯಲ್ಲಿ ನಡೆಯುವ ಕಾಮಿಡಿ ಥ್ರಿಲ್ಲರ್ ಕಥಾನಕ ಈ ಚಿತ್ರದಲ್ಲಿದ್ದು , ಸುಮಾರು ೭೦ ಭಾಗ ಕಾಮಿಡಿ ಹಾಗೂ ೩೦ರಷ್ಟು ಸೀರಿಯಸ್ ಕಥಾಹಂದರ ಈ ಚಿತ್ರದಲ್ಲಿದೆ. ನಿರ್ದೇಶಕ ಜಿ.ಎಸ್. ಕಲಿಗೌಡ ಅವರು ಪ್ರಬಿಕ್ ಜೊತೆಗೂಡಿ ಈ ಚಿತ್ರಕ್ಕೆ ಕಥೆ ಹೆಣೆದಿದ್ದಾರೆ. ಕಲಿಗೌಡ ಅವರ ನಿರ್ದೇಶನದ ಎರಡನೇ ಚಿತ್ರ ಹಾಗೂ ಆತ್ಮ ಸಿನಿಮಾಸ್ ಹಾಗೂ ಪ್ರಬಿಕ್ ಮೊಗವೀರ್ ಫಿಲಂಸ್ ಬ್ಯಾನರ್ನಡಿ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರ ಇದಾಗಿದೆ. ಪ್ರಬಿಕ್ ಮೊಗವೀರ್ ಮತ್ತು ಲಾವಣ್ಯ ಗಢಾ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಚಂದ್ರಾ ಲೇಔಟ್ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನಡೆಯಿತು. ಸಮಾರಂಭದಲ್ಲಿ ವಿವಿಧ ತಳಿಯ ಐದು ನಾಯಿಗಳನ್ನು ಕರೆಸಿ ಅವುಗಳ ನೇತೃತ್ವದಲ್ಲಿ ಸಿನಿಮಾಗೆ ಚಾಲನೆ ನೀಡಲಾಯಿತು, ಚಿತ್ರದ ಪ್ರಥಮ ದೃಶ್ಯಕ್ಕೆ ಪೋಲೀಸ್ ಅಧಿಕಾರಿ ಲೋಕೇಶ್ ಕುಮಾರ್ ಕ್ಲಾಪ್ ಮಾಡಿದರೆ, ಛಾಯಾಗ್ರಾಹಕ ಅಣಜಿ ನಾಗರಾಜ್ ಕ್ಯಾಮೆರಾ ಚಾಲನೆ ಮಾಡಿದರು. ನಿರ್ಮಾಪಕ ಬಾ.ಮಾ.ಹರೀಶ್, ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ , ಟಿ ಶಿವಕುಮಾರ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು.
ಚಿತ್ರದ ನಿರ್ದೇಶಕ ಕಲಿಗೌಡ ಮಾತನಾಡುತ್ತ ಸಾಕಷ್ಟು ಕುತೂಹಲಕಾರಿ ವಿಷಯಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಇದೇ ತಿಂಗಳ ೨೦ರಿಂದ ಚಿತ್ರೀಕರಣ ಆರಂಭಿಸಿ ಬೆಂಗಳೂರು, ಮಂಗಳೂರು, ಮಡಿಕೇರಿ ಸುತ್ತಮುತ್ತ ಸುಮಾರು ೩೦ ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಜನೆಯಿದೆ ಎಂದು ತಿಳಿಸಿದರು. ವಿಶೇಷವಾಗಿ ಚಿತ್ರದಲ್ಲಿ ರೂಬಿ ಎನ್ನುವ ನಾಯಿಯೊಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದೆ. ಈಗಾಗಲೇ ಈ ನಾಯಿಗೆ ಹಲವಾರು ತಿಂಗಳಿಂದ ತರಬೇತಿ ನೀಡಲಾಗಿದೆ, ಈ ರೂಬಿ ನಾಯಿ ಪ್ರೇಕ್ಷಕರನ್ನು ನಗಿಸುವುದರ ಜೊತೆಗೆ ಭಯ ಬೀಳಿಸುತ್ತದೆ ಎಂದು ನಿರ್ಮಾಪಕ ಪ್ರಭಿಕ್ ಮೊಗವೀರ್ ತಿಳಿಸಿದರು. ಚಿತ್ರದಲ್ಲಿ ಅವರು ಕಾಮತ್ ಎಂಬ ನಿರ್ದೇಶಕನ ಪಾತ್ರದಲ್ಲೂ ಸಹ ಕಾಣಿಸಿಕೊಳ್ಳುತ್ತಿದ್ದಾರೆ.
ಹಿರಿಯ ನಟ ದಿನೇಶ್ ಮಂಗಳೂರು ಅಲ್ಲದೆ ವೃತ್ತಿಯಲ್ಲಿ ಡಾಕ್ಟರ್ ಆಗಿರುವ ಲೀಲಾಮೋಹನ್, ಸೂರ್ತಿಗೌಡ, ಬಲ ರಾಜವಾಡಿ, ಎಂ.ಡಿ. ಕೌಶಿಕ್, ಚಂದನ ಜಾನಕಿ, ವಿಕ್ಟರಿ ವಾಸು, ವೀಣಾ, ಅನಿಲ್, ಸುನೀಲ್, ಶ್ರೀನಿ ಸೇರಿದಂತೆ ಹಲವಾರು ನವ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕ್ರಿಸ್ಟೋಫರ್ ಲೀ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.