ಕಲಾವಿದರು ಸಾಮಾನ್ಯವಾಗಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ, ಸ್ಟಾರ್ ಹೋಟೆಲ್ ಗಳಲ್ಲಿ ಆಚರಿಸಿಕೊಳ್ಳುತ್ತಾರೆ. ಆದರೆ ಮನಸಾಗಿದೆ ಚಿತ್ರದ ನಾಯಕ ಅಭಯ್ ಅನಾಥಾಶ್ರಮದ ಮಕ್ಕಳ ಜೊತೆಗೆ ಬೆರೆತು ಹುಟ್ಟುಹಬ್ಬ ಸೆಲಬ್ರೇಟ್ ಮಾಡಿಕೊಳ್ಳುವ ಮೂಲಕ ಸರಳತೆ ಮೆರೆದಿದ್ದಾರೆ. ಗಿರಿನಗರದ ಈ ಅನಾಥಾಶ್ರಮಕ್ಕೆ ಭೇಟಿಕೊಟ್ಟ ನಟ ಅಭಯ್ ಅಲ್ಲಿದ್ದ ಮಕ್ಕಳ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿ, ನಂತರ ಅವರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ.
ನಿರ್ಮಾಪಕ ಚಂದ್ರಶೇಖರ್ ತಮ್ಮ ಪುತ್ರ ಅಭಯ್ ರನ್ನು ಮನಸಾಗಿದೆ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಈಗಾಗಲೇ ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ರಚನೆಯ ಹಾಡುಗಳು ೫ ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗುವ ಮೂಲಕ ವೈರಲ್ ಆಗಿವೆ. ಉಳಿದ ಎರಡು ಹಾಡುಗಳು ಇನ್ನೂ ಬಿಡುಗಡೆಯಾಗಬೇಕಿದೆ.
ನಿರ್ಮಾಪಕರೇ ಕಥೆ ಬರೆದಿದ್ದು, ಶ್ರೀನಿವಾಸ ಶಿಡ್ಲಘಟ್ಟ ನಿರ್ದೇಶನ ಮಾಡಿದ್ದಾರೆ. ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಮೇಘಶ್ರೀ ಹಾಗೂ ಅಥಿರಾ ಇಬ್ಬರು ನಾಯಕಿಯರಾಗಿ ನಟಿಸಿದ್ದಾರೆ. ಸಾಮಾನ್ಯವಾಗಿ ಪ್ರೇಮಕಥೆಗಳಲ್ಲಿ ಜಾತಿ, ಅಂತಸ್ತು, ಶ್ರೀಮಂತಿಕೆ ಅಡ್ಡ ಬಂದರೆ, ಈ ಕಥೆಯಲ್ಲಿ ಮನುಷ್ಯತ್ವ ಅಡ್ಡ ಬರುತ್ತದೆ. ಮಾನಸ ಹೊಳ್ಳ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದಹಾಡುಗಳಿಗೆ ನಾಗೇಂದ್ರ ಅರಸ್, ಕೆ.ಕಲ್ಯಾಣ್, ಕವಿರಾಜ್, ಅರಸು ಅಂತಾರೆ ಸಾಹಿತ್ಯ ರಚಿಸಿದ್ದಾರೆ.