ಯುವ ಪ್ರತಿಭೆ ಚಂದನ್ ಕೇಶವ್ ನಟಿಸಿ ನಿರ್ದೇಶಿಸಿರುವ `ಸಂಹಾರಂ` ಕಿರುಚಿತ್ರ ಟೀಸರ್ ಎಲ್ಲರ ಗಮನ ಸೆಳೆಯುತ್ತಿದೆ. ಸಹ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಚಂದನ್ ಕೇಶವ್ ಕಿರುಚಿತ್ರದ ಮೂಲಕ ತಮ್ಮ ನಿರ್ದೇಶನದ ಸಾಮರ್ಥ್ಯವನ್ನು ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ. ಇತ್ತೀಚೆಗೆ ಸಂಹಾರಂ ಕಿರುಚಿತ್ರದ ಪ್ರೀಮಿಯರ್ ಶೋ ನಡೆದಿದ್ದು ನಿರ್ಮಾಪಕ ಅವಿನಾಶ್ ಶೆಟ್ಟಿ, ವರ್ಷ, ಬ್ರಿಂದ ಆಚಾರ್ಯ, ಅರ್ಚನ ಕಶ್ಯಪ್, ಸುವಿನ್ ವಾಲ್ಸನ್ ಕಿರುಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
`ಸಂಹಾರಂ`ಚಿತ್ರಕ್ಕೆ ಕಥೆ ಬರೆದು ನಿರ್ದೇಶನದ ಜೊತೆಗೆ ಮುಖ್ಯ ಪಾತ್ರದಲ್ಲಿ ಚಂದನ್ ಕೇಶವ್ ಅಭಿನಯಿಸಿದ್ದಾರೆ. ನಿರ್ದೇಶನದ ಜೊತೆಗೆ ನಟನೆಯಲ್ಲೂ ಭರವಸೆ ಮೂಡಿಸಿದ್ದಾರೆ. ಶಿರಿಶಾ ರೆಡ್ಡಿ ನಾಯಕಿಯಾಗಿ ಅಭಿನಯಿಸಿದ್ದು, ಸುಪ್ರೀತ್ ಕೃಷ್ಣಮೂರ್ತಿ, ಸಿಬಿ ಸುಭದೀಪ್, ಸಂದೀಪ್ ಮಲನಿ, ವಿನಯ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.
ನಿರ್ಮಾಪಕ ಮಹೇಶ್ ಗೌಡ ಮಾತನಾಡಿ `ಸಂಹಾರಂ` ಚಿತ್ರ ಸಂಪೂರ್ಣ ಚಂದನ್ ಕೇಶವ್ ಹಾಗೂ ಅವರ ತಂಡದ ಪರಿಶ್ರಮ. ನಾನು ಜೊತೆಗಿದ್ದೀನಿ ಎಂದು ಅಷ್ಟೇ ಹೇಳಿದ್ದು, ಇದರ ಎಲ್ಲಾ ಕ್ರೆಡಿಟ್ಸ್ ಅವರ ತಂಡಕ್ಕೆ ಸಲ್ಲಬೇಕು. ಇದು ಒಂದು ಗಂಟೆ ಅವಧಿಯ ಕಿರುಚಿತ್ರ. ರಿವೇಂಜ್ ಸ್ಟೋರಿ ಚಿತ್ರದಲ್ಲಿದೆ. ಕೋವಿಡ್ ಸಮಯದಲ್ಲಿ ಪೊಲೀಸ್ ಆಫೀಸರ್ ಹಾಗೂ ಸಾಮಾನ್ಯ ವ್ಯಕ್ತಿಯ ನಡುವೆ ನಡೆಯೋ ಮಾತಿನ ಚಕಮಕಿ ವೈಯಕ್ತಿಕ ಹಂತಕ್ಕೆ ತಿರುಗಿ ಏನೆಲ್ಲ ಘಟನೆಗೆ ಕಾರಣವಾಗುತ್ತೆ ಅನ್ನೋದು ಕಿರುಚಿತ್ರದ ಒನ್ ಲೈನ್ ಸ್ಟೋರಿ. ಥ್ರಿಲ್ಲರ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಎಲ್ಲರೂ ಹೊಸ ಹುಡುಗನ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ರಿಯೋ ಆಂಟೋನಿ ಸಂಗೀತ ನಿರ್ದೇಶನ, ಚೇತನ್ ಕೇಶವ್ ಕ್ಯಾಮೆರಾ ವರ್ಕ್, ಚಂದನ್ ಕೇಶವ್ ಸಂಕಲನ ‘ಸಂಹಾರಂ’ ಕಿರುಚಿತ್ರಕ್ಕಿದೆ. `ಹೊನ್ನುಡಿ ಪ್ರೊಡಕ್ಷನ್` ಹಾಗೂ ‘ಮೈಂಡ್ ಹಾರ್ಟ್’ ಸ್ಟುಡಿಯೋಸ್ ಬ್ಯಾನರ್ ನಡಿ ಮಹೇಶ್ ಗೌಡ, ಚಂದನ್ ಕೇಶವ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.