ದರ್ಶನ್ ನಟನೆಯ ಕ್ರಾಂತಿ ಸಿನಿಮಾದ ಮುಹೂರ್ತ ಇಂದು ಬೆಂಗಳೂರಿನ ಚಂದ್ರಾ ಲೇಔಟ್ ನ ಗಣೇಶ ಮಂದಿರದಲ್ಲಿ ನಡೆಯಿತು.
ಮುಹೂರ್ತ ಸಮಾರಂಭವನ್ನು ಸರಳವಾಗಿ ಆಯೋಜಿಸಿತ್ತು ಚಿತ್ರತಂಡ. ನಟಿ, ಸಂಸದೆ ಸುಮಲತಾ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ರಚಿತಾ ರಾಮ್, ಅಭಿಷೇಕ್ ಅಂಬರೀಶ್ ಹೀಗೆ ಸಿನಿಮಾ ರಂಗದ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು.
ಸುಮಲತಾ ಅಂಬರೀಶ್ ಅವರು ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ತಾವೂ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯವನ್ನೂ ಹಂಚಿಕೊಂಡರು. ಹಲವು ವರ್ಷಗಳ ನಂತರ ದರ್ಶನ್ ಜತೆ ನಟಿಸುತ್ತಿರುವುದು ಖುಷಿ ತಂದಿದೆ ಅಂದರು.
ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ನಟಿಸುತ್ತಿದ್ದಾರೆ. ದರ್ಶನ್ ಅವರ ತಂದೆಯ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ರಚಿತಾ ರಾಮ್ ಸಿನಿಮಾದ ನಾಯಕಿ. ದರ್ಶನ್ ಮತ್ತು ರಚಿತಾ ರಾಮ್ ಅವರ ಕಾಂಬಿನೇಷನ್ ನ ಮೂರನೇ ಸಿನಿಮಾ ಇದಾಗಿದೆ.
ಅಕ್ಷರ ಕ್ರಾಂತಿಗಾಗಿ ಹೋರಾಡುವ ನಾಯಕನಾಗಿ ದರ್ಶನ್ ಕಾಣಿಸಿಕೊಳ್ಳುತ್ತಿರುವುದು ಸಿನಿಮಾದ ಮತ್ತೊಂದು ವಿಶೇಷ.
ಕ್ರಾಂತಿ ದರ್ಶನ್ ಅವರ 55ನೇ ಚಿತ್ರ. ಮೀಡಿಯಾ ಹೌಸ್ ಸ್ಟುಡಿಯೋ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ದರ್ಶನ್ ಅವರ 2 ನೇ ಸಿನಿಮಾ. ಯಜಮಾನ ಚಿತ್ರದ ನಂತರ ಶೈಲಜಾ ನಾಗ್ ಮತ್ತು ಬಿ.ಸುರೇಶ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಯಜಮಾನ ಸಿನಿಮಾ ಮೂಲಕ ನಿರ್ದೇಶಕರಾದ, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಈ ಸಿನಿಮಾಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜತೆಗೆ ಸಂಗೀತ ನಿರ್ದೇಶನ ಮತ್ತು ಸ್ಕ್ರಿಪ್ಟ್ ಕೂಡ ವಿ.ಹರಿಕೃಷ್ಣ ಅವರದ್ದೆ.
ಇದೇ ತಿಂಗಳು ಕೊನೆಯ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿತ್ರೀಕರಣಕ್ಕಾಗಿ ಬೃಹತ್ ಸೆಟ್ ಗಳು ಸಿದ್ಧವಾಗಿವೆ.