ಶ್ರೀಚೌಡೇಶ್ವರಿ ಪ್ರಸನ್ನ ಮೂವೀಸ್ ಲಾಂಛನದಲ್ಲಿ ಆರ್.ಶಂಕರ್ ನಿರ್ಮಿಸುತ್ತಿರುವ ‘ಐ.ಪಿ.ಸಿ ಸೆಕ್ಷನ್ ೩೦೦ ಚಿತ್ರಕ್ಕೆ ನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ ಎಂದು ನಿರ್ದೇಶಕ ಶಶಿಕಾಂತ್ ತಿಳಿಸಿದ್ದಾರೆ.
ಬಡವನಾಗಲಿ, ಸಿರಿವಂತನೇ ಇರಲಿ ಸಂಕಷ್ಟ ಯಾರನ್ನು ಬಿಟ್ಟಿದ್ದಿಲ್ಲ. ಹೀಗೆ ಚಿತ್ರದಲ್ಲಿ ಜನಪ್ರಿಯ ಉದ್ಯಮಿಯೊಬ್ಬರು ಯಾವುದೋ ಕೇಸೊಂದರಲ್ಲಿ ಗುರುತಿಸಿಕೊಳ್ಳುವ ಸ್ಥಿತಿ ಬಂದೊದಗುತ್ತದೆ. ಆಗ ವಕೀಲರು ಉದ್ಯಮಿಯ ಬಳಿ ಬಂದು ಕೂಲಂಕುಶವಾಗಿ ಮಾತನಾಡಿ ಕೇಸಿನಿಂದ ಮುಕ್ತಗೊಳಿಸುವ ಭರವಸೆ ನೀಡುತ್ತಾರೆ. ಈ ಸನ್ನಿವೇಶವನ್ನು ನಗರದ ಶ್ರೀಕಂಠೀರವ ಸ್ಟೂಡಿಯೋದಲ್ಲಿ ಸೆರೆ ಹಿಡಿಯಲಾಯಿತು. ಉದ್ಯಮಿಯ ಪಾತ್ರದಲ್ಲಿ ದೇವರಾಜ್ ಕಾಣಿಸಿಕೊಂಡರೆ, ವಕೀಲರಾಗಿ ವಿಜಯರಾಘವೇಂದ್ರ ಅಭಿನಯಿಸಿದ್ದರು. ಇದ್ದಲ್ಲದೆ ನಟಿ ಸುಮನ್ ರಂಗನಾಥ್ ಹಾಗೂ ಸೃಜನ್ ಲೋಕೇಶ್ ಅಭಿನಯಿಸಿದ ಹಲವು ಸನ್ನಿವೇಶಗಳನ್ನೂ ನಿರ್ದೇಶಕರು ಚಿತ್ರೀಕರಿಸಿಕೊಂಡರು.
ಸ್ವಾರಸ್ಯಕರ ಸನ್ನಿವೇಶಗಳಿರುವ ‘ಐ.ಪಿ.ಸಿ ಸೆಕ್ಷನ್ ೩೦೦ ಚಿತ್ರಕ್ಕೆ ಶಶಿಕಾಂತ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವೀರಸಮರ್ಥ್ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಈಶ್ವರ್ ಸಂಕಲನ, ಬಾಬು ಖಾನ್ ಕಲೆ, ಅರುಣ್ ಕುಮಾರ್ ಸಹ ನಿರ್ದೇಶನ, ಅಚ್ಯುತ್ ರಾವ್ ನಿರ್ಮಾಣ ನಿರ್ವಹಣೆ, ಹಾಗೂ ಎಚ್.ನರಸಿಂಹ(ಜಾಲಹಳ್ಳಿ) ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿಜಯರಾಘವೇಂದ್ರ, ಪ್ರಿಯಾಂಕ, ದೇವರಾಜ್, ಸುಮನ್ ರಂಗನಾಥ್, ಸೃಜನ್ ಲೋಕೇಶ್, ಶಂಕರ್, ಮುನಿ, ರವೀಂದ್ರನಾಥ್ ಮುಂತಾದವರಿದ್ದಾರೆ.