ತಂದೆ ತಾಯಿ ತಮ್ಮ ಮಕ್ಕಳಿಗೆ ಹಿರಿಯರು ಹಾಗೂ ಸಂಪ್ರದಾಯವನ್ನು ಗೌರವಿಸಬೇಕು, ಹೇಗೆ ಎಚ್ಚರಿಕೆವಹಿಸಿ ಬದುಕು ನಡೆಸಬೇಕು ಎಂಬ ವಿಚಾರವನ್ನು ಭೂ ನಾಟಕ ಮಂಡಳಿ ಚಿತ್ರದಲ್ಲಿ ಹೇಳಲಾಗಿದೆ. ಕತೆಯ ಕುರಿತು ಹೇಳುವುದಾದರೆ ಉತ್ತಮ ಕುಟುಂಬದಲ್ಲಿ ಬೆಳೆದಂತ ಮುಗ್ದ ರಾಜೀವ್ ತಾತನ ಮಾರ್ಗದರ್ಶನ, ಅಪ್ಪ ಅಮ್ಮನ ಮುದ್ದಿನ ಮಗನಾಗಿ, ಸೋದರಿಯರ ನಡುವೆ ಬೆಳೆಯುವ ಆತ ತನ್ನ ಗೆಳೆಯರೊಂದಿಗೆ ಸ್ನೇಹ ಬೆಳಸಿಕೊಂಡಿರುತ್ತಾನೆ. ಗೆಳೆಯರ ಕುಟುಂಬದಲ್ಲಿ ನಡೆಯುವ ಕೆಲವು ಘಟನೆಗಳ ಬಗ್ಗೆ ಚರ್ಚೆ ಮಾಡುತ್ತಾ, ಮಕ್ಕಳ ಮೇಲೆ ಆಗುವ ಪರಿಣಾಮಗಳ ಅವಲೋಕನ ಮಾಡುತ್ತಾ, ಗೆಳೆಯರು ಹಾಗೂ ಕುಟುಂಬದ ಹಿರಿಯರ ಜೊತೆ ಚರ್ಚಿಸುತ್ತಿರುತ್ತಾನೆ. ತನ್ನಲ್ಲಿ ತಾನು ಧೈರ್ಯ, ಆತ್ಮಸ್ಥೈರ್ಯವನ್ನು ಬೆಳಸಿಕೊಳ್ಳಲು ಸ್ನೇಹಿತರೊಂದಿಗೆ ಚಾಲೆಂಜ್ ಮಾಡಿ, ಒಂದು ದಿನದ ಮಟ್ಟಿಗೆ ಮೈಸೂರಿಗೆ ಹೊರಡುವ ಆತನಿಗೆ ಕೆಲವು ಘಟನೆಗಳು ಎದುರಾಗುತ್ತದೆ. ಅದೆಲ್ಲಾವನ್ನು ಎದುರಿಸಿ ಯಾವ ರೀತಿ ಸಪಲನಾಗುತ್ತಾನೆ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು.
ಹಿರಿಯ ನಟ, ಸಾಹಿತಿ, ನಿರ್ದೇಶಕ ಜಿ.ವಿ.ಅಯ್ಯರ್ ಪುತ್ರ ಜಿ.ವಿ.ರಾಘವೇಂದ್ರ ಸನ್ನಿವೇಶಗಳನ್ನು ಸೃಷ್ಟಿಸಿ ಚೆನ್ನಾಗಿ ಆಕ್ಷನ್ ಕಟ್ ಹೇಳಿರುವುದು ಕಾಣಿಸುತ್ತದೆ. ರಾಜೀವನಾಗಿ ಮಾ.ತುಷಾರ್, ಪೋಷಕರಾಗಿ ರಾಜೇಶ್ಕೃಷ್ಣನ್, ಸ್ಪರ್ಶರೇಖಾ, ತಾತನಾಗಿ ಗೋಟೂರಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಮಾ.ಮಹೇಂದ್ರ, ವೀಣಾರಾವ್, ಸುಜಾತರಾಘವೇಂದ್ರ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಗುರುರಾಜ್ ಮಾರ್ಪಲ್ಲಿ ಸಂಗೀತದಲ್ಲಿ ಹಾಡುಗಳು ಕೇಳಲು ಇಂಪಾಗಿದೆ. ಇದಕ್ಕೆ ಪೂರಕವಾಗಿ ರಾಜುಶಿರಾಳಕೋಪ್ಪ ಕ್ಯಾಮಾರ ಕೆಲಸ ಮಾಡಿದೆ. ಚಿತ್ರವನ್ನು ಮಕ್ಕಳೊಂದಿಗೆ ಮುಜಗರ ಇಲ್ಲದೆ ನೋಡಬಹುದಾಗಿದೆ.