ದುನಿಯಾ ವಿಜಯ್, ಪ್ರಿಯಾಂಕಾ ಉಪೇಂದ್ರ, ಕೆ.ಪಿ ಶ್ರೀಕಾಂತ್ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ನೂತನ ಚಿತ್ರಕ್ಕೆ ಚಾಲನೆ.
"ಮಮ್ಮಿ" ಹಾಗೂ "ದೇವಕಿ" ಎಂತಹ ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ್ದ ಲೋಹಿತ್ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ "ಮಾಫಿಯಾ" ಚಿತ್ರದ ಮುಹೂರ್ತ ಸಮಾರಂಭ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಬಡಾವಣೆಯ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ದುನಿಯಾ ವಿಜಯ್ ಆರಂಭ ಫಲಕ ತೋರಿದರು. ಪ್ರಿಯಾಂಕ ಉಪೇಂದ್ರ ಕ್ಯಾಮೆರಾ ಚಾಲನೆ ಮಾಡಿದರು. ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ಪ್ರಜ್ವಲ್ ಹಾಗೂ ನಾನು ಜಿಮ್ ಸ್ನೇಹಿತರು. ತುಂಬಾ ನಿಗರ್ವಿ ಆತ. ಅದಿತಿ ಅವರು ಚಿತ್ರರಂಗಕ್ಕೆ ಮಹಾಲಕ್ಷ್ಮಿ ಇದ್ದ ಹಾಗೆ. ಅವರ ಅನೇಕ ಚಿತಗಳು ಸೆಟೇರುತ್ತಿದೆ. ಇನ್ನೂ ನಿರ್ದೇಶಕ ಲೋಹಿತ್ ನನ್ನ ಅಭಿನಯದ ಜಯಮ್ಮನ ಮಗ ಹಾಗೂ ರಜನಿಕಾಂತ್ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಆಗ ಚಿಕ್ಕ ಹುಡುಗ. ಈಗಲೂ ಆತ ಚಿಕ್ಕವನೇ. ಒಟ್ಟಿನಲ್ಲಿ ಇಡೀ ತಂಡಕ್ಕೆ ಶುಭವಾಗಲಿ. ಚಿತ್ರ ಯಶಸ್ವಿಯಾಗಲಿ ಎಂದು ದುನಿಯಾ ವಿಜಯ್ ಹಾರೈಸಿದರು.
ನನಗೆ "ಮಮ್ಮಿ" ಚಿತ್ರದ ಕಥೆ ಹೇಳಲು ಲೋಹಿತ್ ಬಂದಾಗ ಹತ್ತೊಂಬತ್ತೊ ಅಥವಾ ಇಪ್ಪತ್ತು ವಯಸ್ಸು ಇರಬೇಕು. ಈಗ "ಮಾಫಿಯಾ" ದಂತಹ ಕಮರ್ಷಿಯಲ್ ಚಿತ್ರ ನಿರ್ದೇಶಿಸುತ್ತಿದ್ದಾರೆ . ಅವರಿಗೆ ಹಾಗೂ ಚಿತ್ರತಂಡಕ್ಕೆ ಶುಭಾಶಯಗಳು ಎಂದರು ಪ್ರಿಯಾಂಕ ಉಪೇಂದ್ರ.
ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಸಹ ಚಿತ್ರತಂಡಕ್ಕೆ ಶುಭ ಕೋರಿದರು.
ಲೋಹಿತ್ ಹೇಳಿದ ಕಥೆ ಇಷ್ಟವಾಯಿತು. ಈ ಚಿತ್ರದಲ್ಲಿ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿಕ್ಕ ವಯಸ್ಸಿನಿಂದ ಯಾರು ಇಲ್ಲದ ಹುಡುಗನಿಗೆ ಗೆಳೆಯನ ಮೇಲೆ ಹೆಚ್ಚು ಪ್ರೀತಿ. ಆ ಗೆಳೆಯ ಕೂಡ ಇನ್ಸ್ ಪೆಕ್ಟರ್ ಆಗಿರುರುತ್ತಾನೆ. ಆತನನ್ನು ನೋಡಿ ತಾನು ಇನ್ಸ್ ಪೆಕ್ಟರ್ ಆಗಬೇಕೆಂದುಕೊಳ್ಳುತ್ತಾನೆ..ಹೀಗೆ ಉತ್ತಮ ಕಥೆಯೊಂದಿಗೆ ಈ ಚಿತ್ರ ಸಾಗುತ್ತದೆ. ನನ್ನ ತಂದೆ ದೇವರಾಜ್ ಅವರು ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಿತಿ ಪ್ರಭುದೇವ, ಒರಟ ಪ್ರಶಾಂತ್ ಮುಂತಾದವರ ಅಭಿನಯಿಸುತ್ತಿರುವುದು ಖುಷಿ ತಂದಿದೆ. ಈ ಚಿತ್ರಕ್ಕಾಗಿ ಎರಡು ವರ್ಷಗಳಿಂದ ಬೆಳೆಸಿದ ಕೂದಲನ್ನು ಕತ್ತರಿಸಿ, ಹೊಸ ಲುಕ್ ನಲ್ಲಿ ಸಿದ್ದವಾಗಿದ್ದೇನೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು ಪ್ರಜ್ವಲ್ ದೇವರಾಜ್.
ನಾನು ಈ ಚಿತ್ರದಲ್ಲಿ ಇನ್ವೆಸ್ಟಿಕೇಶನ್ ಜರ್ನಲಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಅದಕ್ಕಾಗಿ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದೇನೆ. ನನಗೆ ಮಾಧ್ಯಮದಲ್ಲಿ ಕೆಲವು ದಿನಗಳ ಕಾಲ ಕೆಲಸ ಮಾಡಿ ಅನುಭವವಿರುವ ಕಾರಣ ಈ ಪಾತ್ರ ನಿರ್ವಹಿಸುವುದು ಸ್ವಲ್ಪ ಸುಲಭವಾಗಬಹುದು ಅಂದುಕೊಂಡಿದ್ದೇನೆ. ಪ್ರಜ್ವಲ್ ಅವರೊಟ್ಟಿಗೆ ಮೊದಲ ಬಾರಿ ನಟಿಸುತ್ತಿದ್ದೇನೆ. ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು ಅದಿತಿ ಪ್ರಭುದೇವ.
ಇದೊಂದು ಕಂಟೆಂಟ್ ಓರಿಯಂಟೆಡ್ ಚಿತ್ರ. ಪ್ರಜ್ವಲ್ ಅವರು ನೀಡುತ್ತಿರುವ ಸಹಕಾರ ಅಪಾರ. ಅದಿತಿ ಪ್ರಭುದೇವ, ದೇವರಾಜ್, ಒರಟ ಪ್ರಶಾಂತ್, ಸಾಧು ಕೋಕಿಲ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ತಿಂಗಳ ಆರನೇ ತಾರೀಖಿನಿಂದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಆನಂತರ ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣ. ಐದು ಹಾಡುಗಳಿದ್ದು, ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಎರಡು ಹಾಡುಗಳು ಸಿದ್ದಾವಾಗಿದೆ. ತರುಣ್ ಈ ಚಿತ್ರದ ಛಾಯಾಗ್ರಹಕರು. ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು ನಿರ್ದೇಶಕ ಲೋಹಿತ್.
"ಮಾಫಿಯಾ" ಅಂದರೆ ಬರೀ ಮಚ್ಚು, ಲಾಂಗು ಅಲ್ಲ. ಅದನ್ನು ಬೇರೆ ರೀತಿಯಲ್ಲೂ ಹೇಳಬಹುದು ಎಂಬುದನ್ನು ಲೋಹಿತ್ ಈ ಚಿತ್ರದಲ್ಲಿ ತೋರಿಸುತ್ತಿದ್ದಾರೆ. ನಾನು ಚಿಕ್ಕ ವಯಸ್ಸಿನಿಂದಲೂ ದೇವರಾಜ್ ಅವರ ಅಭಿಮಾನಿ. ಈ ಚಿತ್ರದಲ್ಲಿ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಇಬ್ಬರೂ ಅಭಿನಯಿಸುತ್ತಿದ್ದಾರೆ. ನನಗೆ ಸಂಭಾಷಣೆ ಬರೆಯುತ್ತಿರುವುದು ಸಂತಸ ತಂದಿದೆ ಎನ್ನತ್ತಾರೆ ಮಾಸ್ತಿ.
ಬಹಳ ದಿನಗಳ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಸಂತೋಷ ಎಂದರು ಒರಟ ಪ್ರಶಾಂತ್.
ಇದು ನಾನು ಸಾಹಸ ಸಂಯೋಜಿಸುತ್ತಿರುವ 666 ನೇ ಚಿತ್ರ. ಪ್ರಜ್ವಲ್ ಅವರೊಡನೆ ಕೆಲಸ ಮಾಡುವುದೇ ಖುಷಿ ಎನ್ನುತ್ತಾರೆ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ.
ನಿರ್ಮಾಪಕ ಕುಮಾರ್ ಬಿ ಸಹ ಮಾತನಾಡಿ ನಮ್ಮ ಚಿತ್ರಕ್ಕೆ ಶುಭ ಕೋರಲು ಬಂದ ಎಲ್ಲರಿಗೂ ವಂದನೆಗಳು. ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು.