ಕನ್ನಡ ಚಿತ್ರರಂಗಕ್ಕೆ ಈಗ ಸಂಭ್ರಮದ ಕಾಲ. ಒಂದಾದ ಮೇಲೊಂದರಂತೆ ಉತ್ತಮ ಚಿತ್ರಗಳು ಬರುತ್ತಿದೆ. ಅದರಲ್ಲೂ ವಿಶ್ವದೆಲ್ಲೆಡೆ ಕನ್ನಡ ಚಿತ್ರಗಳು ಸದ್ದು ಮಾಡುತ್ತಿದೆ. ಅಷ್ಟೇ ವಿಭಿನ್ನ ಕಥಾವಸ್ತುವುಳ್ಳ ಚಿತ್ರಗಳು ನಿರ್ಮಾಣವೂ ಆಗುತ್ತಿದೆ.
ಶ್ರೀವಾರಿ ಪಿಕ್ಚರ್ಸ್ ಲಾಂಛನದಲ್ಲಿ ಮಹೇಶ್ ಹೆಚ್ ಎಂ ನಿರ್ಮಿಸಿ - ನಿರ್ದೇಶಿಸಿರುವ ಪ್ರಯೋಗಾತ್ಮಕ ಚಿತ್ರ ``ಜೂಮ್ ಕಾಲ್``. ಹೊಸತಂಡದ ಹೊಸಪ್ರಯತ್ನವಾದ, ಹಾರಾರ್ ಕಥಾಹಂದರವನ್ನೂ ಹೊಂದಿರುವ ಈ ಚಿತ್ರದ ಶೀರ್ಷಿಕೆ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಿದೆ.
ಟೈಟಲ್ ಬಿಡುಗಡೆಗೂ ಪೂರ್ವದಲ್ಲಿ ಶೀರ್ಷಿಕೆ ಏನು? ಎಂಬುದನ್ನು ಕಂಡು ಹಿಡಿಯಲು ನೋಡುಗರಿಗೆ ಹೊಸ ರೀತಿಯ ಟಾಸ್ಕ್ ಕೊಡಲಾಗಿತ್ತು. ದೀಪಾವಳಿ ಹಬ್ಬದಂದು ಶೀರ್ಷಿಕೆ ಬಿಡುಗಡೆ ಮಾಡಲಾಯಿತು.
`` ಜೂಮ್ ಕಾಲ್``ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆ. ಇಂಜಿನಿಯರ್ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡುತ್ತಿದಾಗ ಏನೆಲ್ಲಾ ಆಗುತ್ತದೆ? ಎಂಬುದನ್ನು ನೋಡಲು ``ಜೂಮ್ ಕಾಲ್`` ನೋಡಬೇಕು.
ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ನಿರ್ದೇಶಕ ಮಹೇಶ್ ಅವರೆ ಬರೆದಿದ್ದಾರೆ. ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ನಿರ್ದೇಶನದ ಕುರಿತು ಕಲಿತಿರುವ ಮಹೇಶ್, ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಿರಿತೆರೆಯಲ್ಲಿ ಇದು ಅವರ ಮೊದಲ ಚಿತ್ರ. ಎಸ್ ಮಂಜು ಕೊಪ್ಪಳ್ ಛಾಯಾಗ್ರಹಣ ಹಾಗೂ ಸಂಕಲನವಿರುವ ಈ ಚಿತ್ರಕ್ಕೆ ವಿಜಯ್ ರಾಜ್ ಸಂಗೀತ ನೀಡಿದ್ದಾರೆ.
ರೇಣುಕಾ, ಲಕ್ಷ್ಮೀ ಅರಸ್, ರೂಪ ಮನಕೂರ್, ಅರ್ಜುನ್, ಮಹೇಂದ್ರ, ಪರಮ್ ಮುಂತಾದವರು``ಜೂಮ್ ಕಾಲ್`` ನಲ್ಲಿ ಅಭಿನಯಿಸಿದ್ದಾರೆ.