ಹಣ ಖರ್ಚು ಮಾಡಿ ಸಿನೆಮಾ ನಿರ್ಮಾಣಮಾಡುವ ನಿರ್ಮಾಪಕನಿಗೆ ಚಿತ್ರದ ಚಟುವಟಿಕೆಗಳೆಲ್ಲಾ ಅಂದುಕೊಂಡ ಹಾಗೆ ಆದರೆ ಅದಕ್ಕಿಂತ ಹೆಚ್ಚಿನ ಸಂತೋಷ ಬೇರೊಂದಿಲ್ಲ. ಚಿತ್ರ ಸರಾಗವಾಗಿ ಸಾಗಲು ಕಲಾವಿದ ಹಾಗೂ ತಂತ್ರಜ಼್ಞರ ಸಹಕಾರ ಅಗತ್ಯ. ಹಿಂದಿನ ವರ್ಷದಲ್ಲಿ `ನಂದ ಲವ್ಸ್ ನಂದಿತಾ` ಎಂಬ ಯಶಸ್ವಿ ಚಿತ್ರವನ್ನು ನಿರ್ಮಾಣ ಮಾಡಿದ್ದ ರಮೇಶ್ಕಶ್ಯಪ್ ಈಗ ಶಿವರಾಜಕುಮಾರ್ ಅಭಿನಯದಲ್ಲಿ `ಭಾಗ್ಯದ ಬಳೆಗಾರ` ಎಂಬ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ರಸ್ತುತ ಬಳೆಗಾರನಿಗೆ ಮೂವತ್ತು ದಿನಗಳಲ್ಲಿ ಮಾತಿನಭಾಗದ ಚಿತ್ರೀಕರಣ ಪೂರ್ಣವಾಗಿದೆ. ರಾಮನಗರ, ಚನ್ನಪಟ್ಟಣ, ಮದ್ದೂರಿನ ಸುಂದರ ಪರಿಸರದಲ್ಲಿ ಮಾತಿನ ಭಾಗ ಚಿತ್ರೀಕೃತವಾಗಿದೆ. ಚಿತ್ರಕ್ಕೆ ಎಂಟು ಹಾಡುಗಳ ಚಿತ್ರೀಕರಣ ಬಾಕಿಯಿದ್ದು ಮಾರ್ಚನಲ್ಲಿ ಆ ಗೀತೆಗಳು ಚಿತ್ರೀಕೃತವಾಗಲಿದೆ. ಚಿತ್ರೀಕರಣ ಸುಸೂತ್ರವಾಗಿ ಪೂರ್ಣವಾಗಲು ಸಹಕರಿಸಿದ ಶಿವರಾಜಕುಮಾರ್ ಸೇರಿದಂತೆ ಎಲ್ಲಾ ಕಲಾವಿದರಿಗೆ ಹಾಗೂ ನಿರ್ದೇಶಕ ಓಂ.ಸಾಯಿಪ್ರಕಾಶ್ ಮೊದಲುಗೊಂಡಂತೆ ಎಲ್ಲಾ ತಂತ್ರಜ಼್ಞರಿಗೆ ನಿರ್ಮಾಪಕರು ಅಭಿನಂದನೆ ತಿಳಿಸಿದ್ದಾರೆ. ಚಿತ್ರೀಕರಣವಾಗಿರುವ ಭಾಗಕ್ಕೆ ಪ್ರಸಾದ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ಆರಂಭವಾಗಿದೆ.
ಓಂ.ಸಾಯಿಪ್ರಕಾಶ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇಳಯರಾಜ ಸಂಗೀತ ಸಂಯೋಜಿಸುತ್ತಿದ್ದಾರೆ. ಎಂ.ಆರ್.ಸೀನು ಕ್ಯಾಮೆರಾ, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ನಾಗೇಂದ್ರಪ್ರಸಾದ್, ಆನಂದ್ ಗೀತರಚನೆ, ಲಿಂಗರಾಜ್ ಕಗ್ಗಲ್ ಸಹನಿರ್ದೇಶನ, ಪಿ.ಆರ್.ಸೌಂದರರಾಜ್ ಸಂಕಲನ, ಮಧುಗಿರಿಪ್ರಕಾಶ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ನವ್ಯಾನಾಯರ್, ಆದರ್ಶ, ಆದಿಲೋಕೇಶ್, ಸತ್ಯಜಿತ್, ಅಮೃತ, ಪದ್ಮಾವಾಸಂತಿ, ಪ್ರಕಾಶ್ಹೆಗ್ಗೋಡು, ಸುರೇಶ್ಚಂದ್ರ, ಮಳವಳ್ಳಿಸಾಯಿಕೃಷ್ಣ, ಸುರೇಶ್ಮಂಗಳೂರು, ರಮೇಶ್ಕಶ್ಯಪ್ ಮುಂತಾದವರಿದ್ದಾರೆ.