ಸ್ಮೈಲ್ ಶ್ರೀನು ಅವರ ನಿರ್ದೇಶನದ ಓ ಮೈ ಲವ್ ಚಿತ್ರವು ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದ್ದು, ಈಗ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಸಿನಿಮಾ ನೋಡಿದವರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಚಿತ್ರ ಯಶಸ್ವಿಯಾಗಿದೆ. ಈಗಾಗಲೇ 25 ದಿನ ಪೂರೈಸಿದ್ದು, ಸದ್ಯದಲ್ಲೇ 50 ದಿನ ತಲುಪಲಿದೆ. ಕಥೆ ಬರೆದು ನಿರ್ಮಾಣ ಮಾಡಿರುವ ಜಿ.ರಾಮಾಂಜಿನಿ ಅವರಿಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಇಂಥ ಸದಭಿರುಚಿಯ ಮತ್ತಷ್ಟು ಸಿನಿಮಾಗಳು ಈ ಸಂಸ್ಥೆಯಿಂದ ಹೊರಬರಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿ.ಸಿ.ಬಿ ಪ್ರೊಡಕ್ಷನ್ಸ್ ಬ್ಯಾನರ್ ನಿಂದ ಒಂದಷ್ಟು ಹೊಸ ಬಗೆಯ ಸಿನಿಮಾಗಳನ್ನು ನಿರ್ಮಿಸುವ ಯೋಜನೆ ಜಿ.ರಾಮಾಂಜಿನಿ ಅವರಿಗಿದೆ. ಹಾಗೆಯೇ ನಿರ್ದೇಶಕ ಸ್ಮೈಲ್ ಶ್ರೀನು ಅವರಿಗೆ ಕನ್ನಡ ಸೇರಿದಂತೆ ಬೇರೆ ಭಾಷೆಗಳಿಂದಲೂ ಆಫರ್ಸ್ ಬರುತ್ತಿವೆ.
ಚಿತ್ರದ ಯಶಸ್ಸಿನ ಕುರಿತಂತೆ ಮಾತನಾಡಿದ ನಿರ್ದೇಶಕ ಸ್ಮೈಲ್ ಶ್ರೀನು, ಬಿಸಿ ಸೆಂಟರ್ಗಳಲ್ಲಿ ಸಿನಿಮಾ ಚೆನ್ನಾಗಿ ಹೋಗುತ್ತಿದೆ. ಈಗ ಬರುತ್ತಿರುವ ಯಾವ ಸಿನಿಮಾಗಳೂ ವಾರಕ್ಕಿಂತ ಹೆಚ್ಚಾಗಿ ನಿಲ್ಲುತ್ತಿಲ್ಲ, ಅಂಥದ್ದರಲ್ಲಿ ನಮ್ಮ ಚಿತ್ರವನ್ನು ಪ್ರೇಕ್ಷಕರು 50ನೇ ದಿನದತ್ತ ತೆಗೆದುಕೊಂಡು ಹೋಗುತ್ತಿರುವುದು ಒಳ್ಳೇ ಪ್ರಯತ್ನಕ್ಕೆ ಯಾವಾಗಲೂ ಪ್ರೋತ್ಸಾಹಿಸುತ್ತಾರೆಂಬುದಕ್ಕೆ ಸಾಕ್ಷಿ. ಜೊತೆಗೆ ಮಾದ್ಯಮ ಸ್ನೇಹಿತರೆಲ್ಲ ನಮ್ಮ ಸಿನಿಮಾಗೆ ನೀಡಿದ ಉತ್ತಮ ವಿಮರ್ಶೆಗಳು ನಮ್ಮನ್ನು ಹೆಚ್ಚು ಪ್ರೋತ್ಸಾಹಿಸಿದೆ ಎಂದು ಹೇಳಿದ್ದಾರೆ.
ಚಿತ್ರದ ಮೇಕಿಂಗ್ ಹಾಗೂ ಡೈರೆಕ್ಷನ್ ಬಗ್ಗೆ ಉತ್ತಮ ಅಭಿಪ್ರಾಯ ಕೇಳಿಬಂದ ಹಿನ್ನೆಲೆಯಲ್ಲಿ ಸ್ಮೈಲ್ ಶ್ರೀನು ಅವರಿಗೆ ಟಾಲಿವುಡ್ ಹಾಗೂ ಕಾಲಿವುಡ್ ನಿಂದ ಹೆಚ್ಚು ಬೇಡಿಕೆಯಿದ್ದು, ಸದ್ಯದಲ್ಲೇ ಅವರು ಅದರ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕಲಿದ್ದಾರೆ.
ಪ್ರಾರಂಭದಿಂದಲೂ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಧುರೀಣರು ಚಿತ್ರಕ್ಕೆ ಬೆಂಬಲ ಸೂಚಿಸಿ ಶುಭ ಹಾರೈಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿರುವ ನಿರ್ದೇಶಕ ಸ್ಮೈಲ್ ಶ್ರೀನು, ಹಿರಿಯ ಚಿತ್ರೋದ್ಯಮಿ ಕೆ.ರಾಘವೇಂದ್ರ ರಾವ್, ರಿಯಲ್ ಸ್ಟಾರ್ ಉಪೇಂದ್ರ , ಶ್ರೀರಾಮುಲು ಹಾಗೂ ಭಾಸ್ಕರ್ ರಾವ್ ಅವರುಗಳು ನೀಡಿದ ಸಪೋರ್ಟ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದು ನಮ್ಮ ತಂಡಕ್ಕೆ ಹುಮ್ಮಸ್ಸು ನೀಡಿದೆ. ಒಂದು ಚಿತ್ರಕ್ಕೆ ಕಲಾವಿದರಷ್ಟೇ ತಾಂತ್ರಿಕ ಬಳಗವೂ ಅಷ್ಟೇ ಮುಖ್ಯ. ಅದರಂತೆ ಓ ಮೈ ಲವ್ ಚಿತ್ರದ ಯಶಸ್ಸಿನಲ್ಲಿ ತಾಂತ್ರಿಕ ವರ್ಗದ ಪಾಲು ದೊಡ್ಡದಿದೆ. ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ ಹಾಡುಗಳು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಈ ಹಂತದಲ್ಲಿ ಎ2 ಮ್ಯೂಸಿಕ್ ನ ಕೃಷ್ಣ ಪ್ರಸಾದ್ (ಪಚ್ಚಿ), ಪ್ರವೀಣ್ ನೀಡಿದ ಬೆಂಬಲವೂ ಕಾರಣ. ಕ್ಯಾಮೆರಾಮ್ಯಾನ್ ಹಾಲೇಶ್ ಅವರ ಕ್ಯಾಮೆರಾ ಫ್ರೇಮಿಂಗ್ ನಲ್ಲಿ ಸಿನಿಮಾ ಅದ್ಭುತವಾಗಿ ಮೂಡಿಬಂದಿತ್ತು.
ಹೊಸ ಹೀರೋ ಕೈಲಿ ಹೀಗೂ ಸ್ಟಂಟ್ಸ್ ಮಾಡಿಸಬಹುದು ಎಂದು ತೋರಿಸಿಕೊಟ್ಟವರು ರಿಯಲ್ ಸತೀಶ್. ಟೈಟಲ್ ಸಾಂಗ್ ಹಾಗೂ ಗೋವಾ ಸಾಂಗ್ ಸೇರಿದಂತೆ ಎಲ್ಲಾ ಹಾಡುಗಳ ಕೊರಿಯೋಗ್ರಫಿ ಚಿತ್ರದ ಪ್ಲಸ್ ಪಾಯಿಂಟ್ ಆಗಿತ್ತು. ಹಾಗೆಯೇ ಎಡಿಟರ್ ಡಿ.ಮಲ್ಲಿ, ಡಿಟಿಎಸ್ ಮಾಡಿದ ರಾಹುಲ್ ಮತ್ತು ಸಾಧಿಕ್, ಸ್ಪೆಷಲ್ ಸೌಂಡ್ ಮಾಡಿಕೊಟ್ಟ ಶಂಕರ್ ಹಾಗೂ ಡಿಐ ಮಾಡಿದ ಕಮಲ್, ವಿಎಫ್ಎಕ್ಸ್ ಬಳಗದ ಮಂಜು ಹಾಗೂ ಅನಿಲ್, ಕಲಾ ನಿರ್ದೇಶಕ ಜನಾರ್ದನ ಪೂಜಾರಿ, ಕಾರ್ಯಕಾರಿ ನಿರ್ಮಾಪಕಿ ಹಾಗೂ ಕಾಸ್ಟ್ಯೂಮ್ ಮಾಡಿದ ಸಂಧ್ಯಾರಾಣಿ ಇವರೆಲ್ಲರ ಪರಿಶ್ರಮಕ್ಕೆ ಬೆಲೆ ಕಟ್ಟಲಾಗದು. ಅಸಿಸ್ಟೆಂಟ್ ಡೈರೆಕ್ಟರ್`ಗಳಾದ ಮನೋಜ್ ಹಾಗೂ ತೇಜು ಅವರ ಕೆಲಸವನ್ನು ಈಗಲೂ ನೆನಪಿಟ್ಟು ಗೌರವಿಸುತ್ತಾರೆ ನಿರ್ದೇಶಕ ಸ್ಮೈಲ್ ಶ್ರೀನು.