ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಪುನರ್ಜನ್ಮ ಪ್ರೇಮಕಥೆ ಒಳಗೊಂಡ `ರುಧೀರ ಕಣಿವೆ` ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿದರು. ಹಾಡುಗಳು ಚೆನ್ನಾಗಿದೆ. ಛಾಯಾಗ್ರಹಣ, ಮ್ಯೂಸಿಕ್ ಕೂಡ ಅದ್ಭುತವಾಗಿದೆ. ಒಳ್ಳೆ ತಂಡ ಇದಾಗಿದ್ದು, ಒಳ್ಳೆ ಸಿನಿಮಾ ಮಾಡಿರುವ ಭರವಸೆಯಿದೆ ಎಂದು ಭಾ.ಮ.ಹರೀಶ್ ಹಾರೈಸಿದರು.
ನಟ ಧರ್ಮ ಕಿರ್ತಿರಾಜ್ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು. ಚಿತ್ರದ ತುಣುಕುಗಳನ್ನು ನೋಡಿದರೆ ಇದು ವಿಶೇಷವಾದ ಸಿನಿಮಾ ಎನಿಸುತ್ತದೆ. ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಸಮರ್ಥ ಎಂ. `ಈ ಮೊದಲು ನಾನು `ನವ ಇತಿಹಾಸ` ಸಿನಿಮಾ ನಿರ್ದೇಶನ ಮಾಡಿದ್ದು ಇದು ೨ನೇ ಪ್ರಯತ್ನ. ಪ್ರಾರಂಭದಿಂದಲೂ ಚಿತ್ರಕ್ಕೆ ತುಂಬಾ ತೊಂದರೆ ಬಂದಿದ್ದರೂ ನಿರ್ಮಾಪಕರು ಹಾಗೂ ಕಲಾವಿದರು ಒಳ್ಳೆ ಸಪೋರ್ಟ್ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಫೈಟ್, ನಾಲ್ಕು ಹಾಡುಗಳಿದ್ದು, ಬೆಂಗಳೂರು, ರಾಮನಗರ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಸದ್ಯ 5 ಭಾಷೆಗಳಲ್ಲಿ ಸಿನಿಮಾ ಸಿದ್ದವಾಗಿದ್ದು, ಡಿಸೆಂಬರ್ ೩೦ ರಂದು ಬಿಡುಗಡೆ ಆಗಲಿದೆ` ಎಂದರು.
ನಂತರ ಮಾತನಾಡಿದ ಚಿತ್ರದ ನಿರ್ಮಾಪಕ ವಿಜಯ್ ಕುಮಾರ್, `ನಿರ್ದೇಶಕರು ಕಥೆ ಹೇಳಿದಾಗ ಸಿನಿಮಾ ಮಾಡುವ ಆಸೆ ಬಂತು. ಈ ಚಿತ್ರದ ನಾಯಕ ಕಾರ್ತಿಕ್ ನಮ್ಮ ಅಣ್ಣನ ಮಗ. ಶ್ರೀ ಲಕ್ಷ್ಮಿ ನರಸಿಂಹ ಮೂವೀಸ್ ಬ್ಯಾನರ್ ನಲ್ಲಿ ಮೊದಲಬಾರಿಗೆ ನಿರ್ಮಾಣ ಮಾಡಲಾಗಿದೆ. ಈ ಚಿತ್ರವನ್ನು ಮೊದಲು ಕನ್ನಡದಲ್ಲಿ ರಿಲೀಸ್ ಮಾಡಿ, ನಂತರದ ದಿನಗಳಲ್ಲಿ ಬೇರೆ ಭಾಷೆಯಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದ್ದು, ಇದರಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿ ಕೊಡಲಾಗಿದೆ.
ಪ್ರಾರಂಭದಲ್ಲಿ ನಾವು ಕನ್ನಡ ಅಷ್ಟೇ ಪ್ಲ್ಯಾನ್ ಮಾಡಿದ್ವಿ ನಂತರ ಬೇರೆ ಭಾಷೆಗೆ ಪ್ಲ್ಯಾನ್ ಮಾಡಿದ್ವಿ. ಈಗ ಸಿನಿಮಾ ಕನ್ನಡ, ತಮಿಳು, ತೆಲಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತಯಾರಾಗಿದೆ. ಕಥೆಯಲ್ಲಿ ಕಾಮಿಡಿ, ಹಾರರ್, ಆ್ಯಕ್ಷನ್ ಸೇರಿದಂತೆ ಎಲ್ಲಾ ಅಂಶಗಳಿದ್ದು, ಸಿನಿಮಾ ಜನರಿಗೆ ಇಷ್ಟ ಆಗುತ್ತದೆ` ಎಂದು ಹೇಳಿದರು. ಚಿತ್ರ ತಂಡಕ್ಕೆ ಶುಭ ಹಾರೈಸಲು ಬಂದಿದ್ದ ಪ್ರತಾಪ್ ಸಿಂಹ `ಈ ಟೈಟಲ್ ತುಂಬಾ ಚೆನ್ನಾಗಿ ಇದೆ. ತಂಡಕ್ಕೆ ಒಳ್ಳೆದಾಗಲಿ`ಎಂದರು.
ಈ ಚಿತ್ರದ ನಾಯಕನಾಗಿ ಯುವ ಪ್ರತಿಭೆ ಕಾರ್ತಿಕ್ ಅಭಿನಯಿಸಿದ್ದು, ಇವರಿಗೆ ನಾಯಕಿಯರಾಗಿ ದಿಶಾ ಪೂವಯ್ಯ ಹಾಗೂ ಅಮೃತ ಬಣ್ಣ ಹಚ್ಚಿದ್ದಾರೆ.
ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ಎ.ಟಿ ರವೀಶ್ ಮಾತನಾಡಿ, ಇದು ಸ್ಪೆಷಲ್ ಸೌಂಡ್ ಇರುವಂತಹ ಸಿನಿಮಾ. ಕನ್ನಡದಲ್ಲಿ ಒಂದು ಒಳ್ಳೆಯ ಸಿನಿಮಾ ಆಗುವ ನಿರೀಕ್ಷೆ ಇದೆ ಎಂದರು. ಉಳಿದಂತೆ ಸಿನಿಮಾಗೆ ಲಕ್ಕಿ ಗೌಡ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನ, ಚಂದ್ರು ಬಂಡೆ ಮತ್ತು ಅಶೋಕ್ ಸಾಹಸವಿದೆ.