`ಜನತಾ ಗ್ಯಾರೇಜ್`ನಂತರ ತೆಲುಗಿನ ಸ್ಟಾರ್ ನಟ ಜ್ಯೂನಿಯರ್ ಎನ್.ಟಿ.ಆರ್ ಮತ್ತು ನಿರ್ದೇಶಕ ಕೊರಟಾಲ ಶಿವ ಹೊಸ ಚಿತ್ರವೊಂದಕ್ಕೆ ಕೈ ಜೋಡಿಸಿದ್ದು, ಆ ಚಿತ್ರದ ಮುಹೂರ್ತ ಮಾರ್ಚ್ ಅಂತ್ಯದ ಹೊತ್ತಿಗೆ ನೆರವೇರಲಿದೆ. ಈ ಚಿತ್ರ ಘೋಷಣೆಯಾದಾಗಿನಿಂದಲೂ, ಹೊಸ ಹೊಸ ಅಪ್ಡೇಟ್ ಕೊಡುವಂತೆ ಅಭಿಮಾನಿಗಳು ಬೇಡಿಕೆ ಇಡುತ್ತಲೇ ಇದ್ದಾರೆ. ಸೋಮವಾರ ಚಿತ್ರತಂಡದವರು ಒಂದು ಸಂತೋಷದ ವಿಷಯವನ್ನು ಹಂಚಿಕೊಂಡಿದ್ದು, ಈ ಚಿತ್ರಕ್ಕೆ ನಾಯಕಿಯಾಗಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಆಯ್ಕೆಯಾಗಿದ್ದಾರೆ.
ಸೋಮವಾರ, ಜಾಹ್ನವಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಆಕೆಗೆ ಶುಭಾಶಯ ಕೋರುವ ಪೋಸ್ಟರ್ವೊಂದನ್ನು ಚಿತ್ರತಂಡದವರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಆಕೆಯನ್ನು ಚಿತ್ರತಂಡಕ್ಕೆ ಬರಮಾಡಿಕೊಂಡಿದ್ದಾರೆ.
ಜ್ಯೂನಿಯರ್ ಎನ್.ಟಿ.ಆರ್ ಜತೆಗೆ ನಟಿಸಬೇಕು ಎಂಬ ಆಸೆಯನ್ನು ಜಾಹ್ನವಿ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದರು. ಆ ಆಸೆ ಈಗ `ಎನ್.ಟಿ.ಆರ್ 30` ಮೂಲಕ ಈಡೇರಲಿದೆ. ಈ ಚಿತ್ರವು ಬರೀ ಆಕ್ಷನ್ ಚಿತ್ರವಷ್ಟೇ ಅಲ್ಲ, ಒಂದು ಅದ್ಭುತ ಸೆಂಟಿಮೆಂಟ್ ಚಿತ್ರವಾಗಿರಲಿದೆ ಎಂದು ಚಿತ್ರತಂಡದವರು ಅಭಿಪ್ರಾಯ ಪಟ್ಟಿದ್ದಾರೆ.
ಯುವಸುಧಾ ಆರ್ಟ್ಸ್ ಮತ್ತು ಎನ್.ಟಿ.ಆರ್ ಆರ್ಟ್ಸ್ ಸಂಸ್ಥೆಗಳಡಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ಕೆ ನಿರ್ಮಿಸುತ್ತಿರುವ ಈ ಚಿತ್ರವನ್ನು ನಂದಮೂರಿ ಕಲ್ಯಾಣ್ ರಾಮ್ ಅರ್ಪಿಸುತ್ತಿದ್ದಾರೆ. ರತ್ನವೇಲು ಛಾಯಾಗ್ರಹಣ, `ರಾಕ್ಸ್ಟಾರ್` ಅನಿರುದ್ಧ್ ಸಂಗೀತ ಮತ್ತು ಶ್ರೀಕರ್ ಪ್ರಸಾದ್ ಅವರ ಸಂಕಲನವಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳು ಅಪಾರ ನಿರೀಕ್ಷೆಯನ್ನಿಟ್ಟುಕೊಂಡಿದ್ದು, ಈ ಚಿತ್ರ 2024ರ ಏಪ್ರಿಲ್ 05ರಂದು ಬಿಡುಗಡೆಯಾಗುತ್ತಿದೆ.