ಸ್ನೇಹಾ
ಚಿತ್ರ : ಕ್ರಿಟಿಕಲ್ ಕೀರ್ತನೆಗಳು
ತಾರಾಗಣ: ತಬಲಾ ನಾಣಿ, ಅಪೂರ್ವ, ಸುಚೇಂದ್ರ ಪ್ರಸಾದ್, ಯಶಸ್ ಅಭಿ, ಅಪೂರ್ವ ಜಗದೀಶ್, ತರಂಗ ವಿಶ್ವ, ರಾಜೇಶ್ ನಟರಂಗ, ಅಪೂರ್ವ, ಅರುಣಾ ಬಾಲರಾಜ್, ಮಾಸ್ಟರ್ ಪುಟ್ಟರಾಜು, ಮಾಸ್ಟರ್ ಮಹೇಂದ್ರ, ಯಶ್ ಶೆಟ್ಟಿ, ದಿನೇಶ್ ಮಂಗಳೂರು
---------------
ಜೂಜು ಹೇಗೆ ಒಂದು ಮನೆ, ಸಂಸಾರ, ವ್ಯಕ್ತಿ, ಜೊತೆಗೆ ಇಡೀ ಸಮಾಜವನ್ನೇ ಹಾಳು ಮಾಡುತ್ತೆ ಅನ್ನೋದನ್ನು ಸಿನಿಮಾ ಹೇಳೋಕೆ ಹೊರಟಿದೆ...ಈ ಸಿನಿಮಾದ ಕಥಾವಸ್ತು ಐಪಿಎಲ್ ಬೆಟ್ಟಿಂಗ್.
ನೈಜ ಘಟನೆಗಳನ್ನು ಆಧರಿಸಿ ಕಾಲ್ಪನಿಕ ಪಾತ್ರಗಳ ಮೂಲಕ ಬೆಟ್ಟಿಂಗ್ ನ ಕರಾಳ ಮುಖವನ್ನು ಅನಾವರಣಗೊಳಿಸಿದ್ದಾರೆ.
ನಾಲ್ಕು ಬೇರೆ ಬೇರೆ ಊರು, ಬೇರೆಯದ್ದೇ ಮನಸ್ಥಿಗಳು, ಒಂದೇ ಕನೆಕ್ಟಿಂಗ್ ಪಾಯಿಂಟ್ ಅದು ಕ್ರಿಕೆಟ್..
ತಮ್ಮದೇ ಲೋಕದಲ್ಲಿದ್ದ ಪ್ರೇಮಿಗಳು, ಗಂಡ ಹೆಂಡತಿ ಮಗು ಪುಟ್ಟ ಮಗು ಸೇರಿದಂತೆ ನೆಮ್ಮದಿ ಸಂಸಾರ, ಪ್ರಾಮಾಣಿಕ ಆಟೋ ಡ್ರೈವರ್, ಗಂಡನಿಲ್ಲದೇ ಕೂಲಿ ಮಾಡಿ ಮಗನನ್ನ ಸಾಕೋ ತಾಯಿ ಸಿನಿಮಾದ ಪಾತ್ರಧಾರಿಗಳು.
ರಾತ್ರೋರಾತ್ರಿ ಶ್ರೀಮಂತನಾಗಬೇಕು ಪ್ರೇಯಸಿಯನ್ನು ರಾಣಿ ಹಾಗೆ ನೋಡ್ಕೋಬೇಕು ಅನ್ನೋದು ತಬ್ಬಲಿ ಹುಡುಗನ ಕನಸು, ಸಾಫ್ಟ್ವೇರ್ ಉದ್ಯೋಗದಲ್ಲಿದ್ರು ಕ್ರಿಕೆಟ್ ಮೇಲಿನ ಹುಚ್ಚಿಂದ ಗಳಿಸಿದ್ದನ್ನು ಉಳಿಸೋಕು ಯೋಚಿಸದೇ ದುರಾಸೆಗೆ ಬೀಳೋದು, ಹೊಟ್ಟೆಪಾಡಿಗಾಗಿ ಅವಲಂಬಿಸಿದ್ದ ಆಟೋಗೆ ತಿಂಗಳ ರಜೆ ಘೋಷಿಸಿ ಐಪಿಎಲ್ ಮ್ಯಾಚ್ ನೋಡೋದು, ಅಮ್ಮನಿಗೆ ನೆರವಾಗ್ಬೇಕು ಅಂತ ಸ್ನೇಹಿತನ ಮಾತು ಕೇಳಿ ದುಡುಕು ನಿರ್ಧಾರ ಮಾಡುವುದು, ಈ ನಾಲ್ಕು ಎಳೆಗಳ ಸುತ್ತು ಸಿನಿಮಾ ಸಾಗುತ್ತೆ. ನಾಲ್ಕು ಕೀರ್ತನೆಗಳ ಆರಂಭವೂ ಬೆಲ್ಲದಂತೆಯೇ ಇರುತ್ತೆ.
ಕಥೆ ಮುಂದುವರೆಯುತ್ತಾ ಬೇವಾಗಿ ಪರಿವರ್ತನೆಗೊಳ್ಳತ್ತೆ... ಬೇವನ್ನು ಅರಗಿಸಿಕೊಳ್ತಾರಾ ಅಥವಾ ಬದುಕನ್ನೇ ಕೈಚೆಲ್ಲಿ ಬಿಡ್ತಾರಾ ಅನ್ನೋ ಪ್ರಶ್ನೆಗೆ ನೀವು ಸಿನಿಮಾ ನೋಡಿದ್ರೆ ಉತ್ತರ ಸಿಗತ್ತೆ..ಅಡ್ವೋಕೇಟ್ ಪಾತ್ರದ ಮೂಲಕ ತಬಲಾ ನಾಣಿಯವರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನದಲ್ಲಿರ್ತಾರೆ. ಯಾರೂ ತಲೆ ಕೆಡಿಸಿಕೊಳ್ಳದ ಕೇಸುಗಳನ್ನು ಕೈಗೆತ್ತಿಕೊಂಡು ವಾದಕ್ಕಿಳಿಯೋ ಮೂಲಕ ಒಳ್ಳೆಯ ಸಂದೇಶ ನೀಡೋಕೆ ಹೊರಟಿದ್ದಾರೆ. ಇಂಥ ವಿಚಾರಗಳನ್ನು ಪ್ರಾಕ್ಟಿಕಲ್ ಹೇಗೆ ನೋಡ್ಬೇಕು ಅನ್ನೋದನ್ನು ಜಡ್ಜ್ ಆಗಿ ಸುಚೇಂದ್ರ ಪ್ರಸಾದ್ ತಿಳಿಸ್ತಾರೆ.
ಎಲ್ಲಾ ಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತುಘಲಕ್ ಪಾತ್ರದ ಮೂಲಕ ಟಿಪಿಕಲ್ ಐಪಿಎಲ್ ಫ್ಯಾನ್ಸ್ ಪ್ರತಿನಿಧಿಯಾಗಿ ತರಂಗ ವಿಶ್ವ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಅಮ್ಮನಾಗಿ ಅರುಣಾ ಬಾಲರಾಜ್ ಇಷ್ಟವಾಗ್ತಾರೆ. ಸಿಕ್ಕ ಪಾತ್ರದಲ್ಲಿ ಬಾಲ ಕಲಾವಿದ ಮಹೇಂದ್ರ ಎಲ್ಲರನ್ನೂ ನಗಿಸೋ ಪ್ರಯತ್ನ ಮಾಡಿದ್ದಾರೆ.
ಸಿನಿಮಾದಲ್ಲಿ ಒಳ್ಳೆಯ ಸಂದೇಶ ಇದೆ ಜೊತೆಗೆ ಇನ್ನಷ್ಟು ಕಾಮಿಡಿ ಇದ್ದಿದ್ರೆ ನೋಡುಗರಿಗೆ ಮತ್ತಷ್ಟು ಇಷ್ಟವಾಗ್ತಿತ್ತು. ನಿರ್ದೇಶಕ ಕುಮಾರ್ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.