ಸಾಕಷ್ಟು ಗೊಂದಲ, ವಿವಾದಗಳ ನಂತರ ಚುನಾವಣೆ ನಡೆದು ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ (ಕಾನ್ಫಿಡಾ) ಮುಂಬರುವ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸಂಘದ ನೂತನ ಅಧ್ಯಕ್ಷರಾದ ಎನ್.ಆರ್. ನಂಜುಂಡೇಗೌಡರು ಇತ್ತೀಚಿಗೆ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ(ಕಾನ್ಫಿಡಾ)ಗೆ ಒಂದು ದೊಡ್ಡ ಪರಂಪರೆಯ ಇತಿಹಾಸವಿದೆ.
ಪುಟ್ಟಣ್ಣ ಕಣಗಾಲ್, ರಾಜೇಂದ್ರಸಿಂಗ್ ಬಾಬು ಅಂಥವರು ಕಟ್ಟಿ ಬೆಳೆಸಿದ 4 ದಶಕಗಳ ಇತಿಹಾಸವಿರುವ ಈ ಸಂಘ ರಾಜ್ಯಪ್ರಶಸ್ತಿಗಿಂತ ಕಮ್ಮಿ ಇಲ್ಲದ ಹಾಗೆ ಕಾನ್ಫಿಡಾ ಅವಾರ್ಡ್ ಸಮಾರಂಭವನ್ನು ನಡೆಸಿಕೊಂಡು ಬಂದಿತ್ತು. ಆದರೆ ಈ ನಡುವೆ ಕಾರಣತರಗಳಿಂದ ಅದು ನಿಂತುಹೋಗಿತ್ತು. ಈಗ ನನ್ನ ಜೊತೆಗಿರುವ ತಂಡ ಎನರ್ಜಿಟಿಕ್ ಆಗಿದೆ. ಅದನ್ನು ಮತ್ತೆ ಮುಂದುವರೆಸಿಕೊಂಡು ಹೋಗುತ್ತೇವೆ. ಅಲ್ಲದೆ ಇದೇ ತಿಂಗಳ ೩೦ ರಂದು ಕಳೆದ ೪ ದಶಕಗಳಿಗೂ ಮೇಲ್ಪಟ್ಟು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ನಿರ್ದೇಶಕರುಗಳನ್ನು ಗೌರವಿಸುವ ಕಾರ್ಯಕ್ರಮವನ್ನು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸ್ಕೌಟ್ ಭವನದಲ್ಲಿ ಹಮ್ಮಿಕೊಂಡಿದ್ದೇವೆ.
ಸದ್ಯ ಸಂಘದಲ್ಲಿ ಯಾವುದೇ ಬಂಡವಾಳ ಇಲ್ಲದಿದ್ದರೂ ಈ ಕಾರ್ಯಕ್ರಮ ಮಾಡಬೇಕು ಎಂದಾಗ ಸಾಕಷ್ಟು ಜನ ಕಲಾವಿದರು, ನಿರ್ಮಾಪಕರುಗಳು ಕೈ ಜೋಡಿಸುತ್ತಿದ್ದಾರೆ. ಅದೇ ಧೈರ್ಯದ ಮೇಲೆ ನಾವು ಈ ಸಾಹಸ ಮಾಡುತ್ತಿದ್ದೇವೆ, ಸದ್ಯ ಸಂಘದ ತಾತ್ಕಾಲಿಕ
ಕಛೇರಿಯನ್ನು ಶೇಷಾದ್ರಿಪುರಂನಲ್ಲಿ ತೆರೆದಿದ್ದೇವೆ. ಅಲ್ಲದೆ ಸಂಘಕ್ಕೆ ಹೊಸದಾಗಿ ಸದಸ್ಯರನ್ನು ಸೇರಿಕೊಳ್ಳುವಂತೆ ಪ್ರೋತ್ಸಾಹಿಸುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಎಂ. ಜಿ. ರಾಮಮೂರ್ತಿ, ನಾಗೇಂದ್ರ ಅರಸ್, ಎನ್ರ್ಕೆ ವಿಶ್ವನಾಥ್, ಮಂಜು ಮಸ್ಕಲ್ಮಟ್, ಕಾರಂಜಿ ಶ್ರೀಧರ್ ಹಾಗೂ ಇತರರು ಉಪಸ್ಥಿತರಿದ್ದರು.