ಚಂದನವನಕ್ಕೆ ಬಹುತೇಕ ಯುವ ಪಡೆಗಳ ಸದ್ದು ಜೋರಾಗಿಯೇ ನಡೆಯುತ್ತಿದೆ. ಬಣ್ಣದ ಬದುಕು ಎಲ್ಲರನ್ನು ಆಕರ್ಷಿಸುತ್ತದೆ. ಆದರೆ ಕೆಲವರನ್ನು ಮಾತ್ರ ತನ್ನತ್ತ ಸೆಳೆಯುತ್ತದೆ. ಆ ಸಾಲಿಗೆ ಈ ಯುವ ಪಡೆಗಳು ಸೇರ್ಪಡೆಯಾಗುವ ಮೂಲಕ ನಾವು ಕೂಡ ಒಂದು ವಿಭಿನ್ನ ಚಿತ್ರವನ್ನ ಮಾಡಿದ್ದೇವೆ ಎಂದು ಹೇಳುತ್ತಾ "ಜಾಡ ಘಟ್ಟ" ಎಂಬ ಶೀರ್ಷಿಕೆಯೊಂದಿಗೆ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಚಾಮರಾಜಪೇಟೆಯ ಕಲಾವಿದರ ಭವನದಲ್ಲಿ ಆಯೋಜಿಸಿತ್ತು.
ಈ ಒಂದು ಕಾರ್ಯಕ್ರಮ ಕೆಲವು ದಿನಗಳ ಹಿಂದೆಯೇ ನಡೆಯಬೇಕಿತ್ತು. ಆದರೆ ನಮ್ಮ ಕರುನಾಡಿನ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆಯಿಂದ ಮುಂದೂಡಲಾಗಿತ್ತು. ಇಂದು ಕೂಡ ಚಿತ್ರತಂಡ ಅಪ್ಪು ರವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿತು.
ಚಿತ್ರರಂಗದಲ್ಲಿ ಸುಮಾರು ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಸಂಕಲನಕಾರನಾಗಿ ಕಿರುತೆರೆ ಹಾಗೂ ಬೆಳ್ಳಿಪರದೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವಂತಹ ಯುವ ಪ್ರತಿಭೆ ಎಸ್. ರಘು.
ಈ ಚಿತ್ರಕ್ಕೆ ಕಥೆ , ಚಿತ್ರಕಥೆ , ಸಂಭಾಷಣೆ, ಸಂಕಲನ , ನಿರ್ದೇಶನದ ಜತೆಗೆ ನಾಯಕ ನಟನಾಗಿ ಬೆಳ್ಳಿಪರದೆ ಮೇಲೆ ರಘು ಜಾಡ ಘಟ್ಟ ಪ್ರಥಮ ಬಾರಿಗೆ ಮಿಂಚಲು ಹೊರಟಿರುವುದು ಮತ್ತೊಂದು ವಿಶೇಷ.
ಜಾಡ ಘಟ್ಟ ಎಂಬ ಪದ ಕೇಳಿದಾಕ್ಷಣ ನೆನಪಿಗೆ ಬರುವುದು ಇದು ಯಾವುದಾದರ ಊರು ಎಂಬ ಪ್ರಶ್ನೆ ಬರುವುದು ಸಹಜ. ಹೌದು ಇದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿರುವ ಜಾಡ ಘಟ್ಟ ಎಂಬ ಊರು. ಆ ಊರಿನ ಸುತ್ತ ಬರೀ ಬೆಟ್ಟಗಳೇ ಆವರಿಸಿಕೊಂಡಿದೆಯಂತೆ. ಅದು ಚಿತ್ರೀಕರಣಕ್ಕೆ ಸೂಕ್ತವಾದ ಸ್ಥಳ ಎಂದು ನಿರ್ಧರಿಸಿ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರವನ್ನ ಮಾಡಿದ್ದಾರಂತೆ. ಇದೊಂದು ಕೌಟುಂಬಿಕ ಚಿತ್ರವಾಗಿದ್ದು ತಂದೆ ಮಗನ ಬಾಂಧವ್ಯ , ಪ್ರೀತಿಯ ಸಿಂಚನ , ಗೆಳೆತನ ಹೀಗೆ ಎಲ್ಲಾ ಅಂಶಗಳನ್ನು ಒಳಗೊಂಡಿರುವಂತಹ ಚಿತ್ರ ಇದಾಗಿದೆಯಂತೆ. ಈ ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ಅಭಿಷೇಕ್. ಜಿ. ರಾಯ್ ಸಂಗೀತವನ್ನು ನೀಡಿದ್ದಾರೆ. ಬೃಂದಾವನ ಆಡಿಯೋ ಸಂಸ್ಥೆ ಮೂಲಕ ಚಿತ್ರದ ಹಾಡುಗಳು ಲೋಕಾರ್ಪಣೆಗೊಂಡಿವೆ. ಈ ಚಿತ್ರದ ಲಿರಿಕಲ್ ಹಾಡನ್ನು ಕೂಡ ಇದೇ ಸಂದರ್ಭದಲ್ಲಿ ದೊಡ್ಡ ಪರದೆಯ ಮೇಲೆ ಪ್ರದರ್ಶಿಸಲಾಯಿತು.
ಈ ಜಾಡ ಘಟ್ಟ ಚಿತ್ರವನ್ನು ಶಶಿಮಣಿ ಎಂಬ ನಿರ್ಮಾಪಕಿ ನಿರ್ಮಿಸಿದ್ದಾರೆ. ಇವರು ನಟ , ನಿರ್ದೇಶಕ ರಘು ರವರ ಸೋದರಿ ಕೂಡ ಹೌದು. ಚಿತ್ರರಂಗದಲ್ಲಿ ತಮ್ಮ ಸಹೋದರ ಬೆಳೆಯಲಿ ಎಂಬ ಆಸೆಯಿಂದ ಈ ಚಿತ್ರವನ್ನು ನಿರ್ಮಿಸಿದ್ದು , ಹಾಗೆಯೇ ನಾಲ್ವರಿಗೆ ಅವಕಾಶ ನೀಡುವುದರ ಜೊತೆಗೆ ಇಡೀ ಚಿತ್ರ ತಂಡಕ್ಕೆ ಬೆನ್ನೆಲುಬಾಗಿ ನಿಂತು ತಾವು ಕೂಡಾ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರಂತೆ. ಈ ಚಿತ್ರದಲ್ಲಿ ಯುವ ಪ್ರತಿಭೆ ಸುಹಾನ. ಎಸ್ ನಾಯಕಿಯಾಗಿ ಕಾಣಿಸಿಕೊಂಡಿದ್ದು , ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿರಲಿಲ್ಲ. ಇನ್ನು ಈ ಚಿತ್ರಕ್ಕೆ ಪ್ರದೀಪ್ ಜೈನ್ ಛಾಯಾಗ್ರಹಣ ಮಾಡಿದ್ದು , ಲಕ್ಷ್ಮೀಕಾಂತ್ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಗಾಯಕ ಶಶಾಂಕ್ ಶೇಷಗಿರಿ ಈ ಚಿತ್ರಕ್ಕಾಗಿ ಒಂದು ಹಾಡನ್ನು ಹಾಡಿದ್ದಾರೆ. ಯುವ ಪ್ರತಿಭೆ ಚಂದ್ರು ಖಳನಾಯಕ ನಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಲಕ್ಷ್ಮೀಕಾಂತ್ ವಸ್ತ್ರ ವಿನ್ಯಾಸ ಮಾಡಿದ್ದು , ಅರ್ಜುನ್ ಸಹ ನಿರ್ದೇಶನವಿದೆ.
ಯುವ ಪ್ರತಿಭೆಗಳು ಸೇರಿಕೊಂಡು ನಿರ್ಮಾಣ ಮಾಡಿರುವ ಈ ಚಿತ್ರವು ಶಶಿಮಣಿ ಪ್ರೊಡಕ್ಷನ್ಸ್ ಮೂಲಕ ಸಿದ್ಧವಾಗಿದೆ. ಸದ್ಯ ಚಿತ್ರ ತನ್ನ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆ ಹಂತವನ್ನು ತಲುಪಿದೆ. ಈಗ ಚಿತ್ರತಂಡ ಲಿರಿಕಲ್ ವಿಡಿಯೋ ವನ್ನ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಈ ಚಿತ್ರದ ಬೆಂಬಲಕ್ಕೆ ದೊಡ್ಡ ಸಮೂಹವೇ ಸೇರಿಕೊಂಡಿದ್ದು , ಈಗಾಗಲೇ ಆಟೋ ಡ್ರೈವರ್ ಗಳು ಸೇರಿದಂತೆ ಹಲವಾರು ಸ್ನೇಹಿತರು ಕೈಜೋಡಿಸಿ ಈ ಜಾಡ ಘಟ್ಟ ಚಿತ್ರದ ಪೋಸ್ಟರುಗಳು ಎಲ್ಲರ ಗಮನ ಸೆಳೆಯುವಂಥ ಕೆಲಸವನ್ನ ಮಾಡಿದ್ದಾರಂತೆ. ಅತಿ ಶೀಘ್ರದಲ್ಲಿ ಚಿತ್ರತಂಡ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡುವ ಮೂಲಕ ಈ ಚಿತ್ರವನ್ನು ತೆರೆ ಮೇಲೆ ತರಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆಯoತೆ.