ಕನ್ನಡ ಚಿತ್ರರಂಗದಲ್ಲಿ ಶಂಕರ್ ನಾಗ್ ಅವರ ``ಇದು ಸಾಧ್ಯ``, ಎಸ್ ನಾರಾಯಣ್ ಅವರ `` ದಕ್ಷ`` ಸೇರಿದಂತೆ ಕೆಲವು ಚಿತ್ರಗಳ ಚಿತ್ರೀಕರಣ ಕೆಲವೇ ಗಂಟೆಗಳಲ್ಲಿ ಮುಗಿದಿದ್ದು ಎಲ್ಲರಿಗೂ ತಿಳಿದ ಸಂಗತಿ.
ಈಗ ನೂತನ ಉತ್ಸಾಹಿ ತಂಡವೊಂದು ``ಯಂಗ್ ಮ್ಯಾನ್`` ಚಿತ್ರದ ಇಡೀ ಚಿತ್ರೀಕರಣವನ್ನು ಕೇವಲ ಆರು ಗಂಟೆಗಳಲ್ಲಿ ಮುಗಿಸುವ ಪ್ರಯತ್ನಕ್ಕೆ ಮುಂದಾಗಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಎರಡು ತಿಂಗಳಿನಿಂದ ಪೂರ್ವ ತಯಾರಿ ನಡೆಯುತ್ತಿದೆ. ಚಿತ್ರದ ಅವಧಿ ಮಾಮೂಲಿ ಚಿತ್ರಗಳ ತರಹ ಎರಡು ಗಂಟೆಗೂ ಅಧಿಕ ಸಮಯವಿರುತ್ತದೆ.
ಮುತ್ತುರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ವಿಜಯಲಕ್ಷ್ಮಿ ರಾಮೇಗೌಡ ನಿರ್ಮಾಣ ಮಾಡುತ್ತಿದ್ದಾರೆ. ಕ್ರಿಯೇಟಿವ್ ಹಡ್ ಆಗಿ ಮುರಳಿ ಎಸ್ ವೈ ಕಾರ್ಯ ನಿರ್ವಹಿಸಲಿದ್ದಾರೆ. ಲೋಕಿ ಸಂಗೀತ ನಿರ್ದೇಶನ ಹಾಗೂ ನಾಗರಾಜ್ ವೀನಸ್ ಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಸುನೀಲ್ ಗೌಡ, ರಾಶಿಕಾ ಕರಾವಳಿ, ಹರೀಶ್ ಆಚಾರ್ಯ, ಶೃತಿ ಗೌಡ, ಋಷಿ ಅನಿತಾ, ಆನಂದ ಕುಮಾರ್, ನಯನ ಪುಟ್ಡಸ್ವಾಮಿ, ತನುಜಾ, ಅನುಕುಮಾರ್, ಜಯರಾಮ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ದೇಶಪ್ರೇಮ ಕುರಿತಾದ ಕಥಾಹಂದರ ಹೊಂದಿರುವ ``ಯಂಗ್ ಮ್ಯಾನ್`` ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಾಗಮಂಗಲದ ಮುಳ್ಳ್ ಕಟ್ಟಮ್ಮ ದೇವಸ್ಥಾನದಲ್ಲಿ ನೆರವೇರಿತು. ಶಾಸಕ ಸುರೇಶ್ ಗೌಡ ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.