ಉದಯ ಟಿವಿ ಧಾರಾವಾಹಿಗಳು ಜನಸಾಮಾನ್ಯರ ಕಥೆಯನ್ನು ಪ್ರಸ್ತುತಪಡಿಸುತ್ತ ವೀಕ್ಷಕರ ಹೃದಯಕ್ಕೆ ಇನ್ನಷ್ಟು ಹತ್ತಿರವಾಗುತ್ತಿವೆ. ಸಂಜೆ 6 ಗಂಟೆಗೆ ಗೌರಿಪುರದ ಗಯ್ಯಾಳಿಗಳು, ಸಂಜೆ 6:30 ಕ್ಕೆ ಕನ್ಯಾದಾನ, ಸಂಜೆ 7 ಕ್ಕೆ ಅಣ್ಣತಂಗಿ, ರಾತ್ರಿ 7:30ಕ್ಕೆ ನೇತ್ರಾವತಿ, ರಾತ್ರಿ 8 ಕ್ಕೆ ಸುಂದರಿ, ರಾತ್ರಿ 8:30ಕ್ಕೆ ರಾಧಿಕಾ, ರಾತ್ರಿ ೯ ಕ್ಕೆ ಜನನಿ, ರಾತ್ರಿ 9:30 ಕ್ಕೆ ನಯನತಾರಾ ಹಾಗೂ ರಾತ್ರಿ 10 ಗಂಟೆಗೆ ಸೇವಂತಿ ಧಾರಾವಾಹಿಗಳು ಅತಿರಂಜಿತವಲ್ಲದ ನೈಜ ನಿರೂಪಣೆಯೊಂದಿಗೆ ಜನಮನ ಗೆಲ್ಲುತ್ತಿವೆ.
ಕೆಲವು ಉದಯ ಧಾರಾವಾಹಿಗಳು ಈ ಹಬ್ಬದ ಋತುವಿನಲ್ಲಿ ೫೦೦ ಸಂಚಿಕೆಗಳ ಸಂಭ್ರಮ ಕಾಣುತ್ತಿವೆ. ಸುಂದರಿ, ನಯನತಾರಾ ಧಾರಾವಾಹಿಗಳು ಇತ್ತೀಚೆಗಷ್ಟೇ 500 ಸಂಚಿಕೆ ದಾಟಿದ್ದರೆ, ನೇತ್ರಾವತಿ ಹಾಗೂ ಗೌರಿಪುರದ ಗಯ್ಯಾಳಿಗಳು ೫೦೦ರ ಹೊಸ್ತಿಲಲ್ಲಿವೆ. ಈ ನಾಲ್ಕೂ ಧಾರಾವಾಹಿಗಳು 2021 ರ ಶುರುವಿನಲ್ಲಿ ಪ್ರಸಾರ ಆರಂಭಿಸಿದ್ದವು. ಸೇವಂತಿ ಧಾರಾವಾಹಿ ಈಗಾಗಲೇ ೧೦೦೦ ಸಂಚಿಕೆಗಳನ್ನು ದಾಟಿರುವುದು ಗಮನಾರ್ಹ.
ಉದಯ ಧಾರಾವಾಹಿಗಳಲ್ಲಿ ದೀಪಾವಳಿ ಸಡಗರ ಜೋರಾಗಿದೆ. ಸಂಜೆ ೭ ಗಂಟೆಗೆ ಪ್ರಸಾರವಾಗುವ ಅಣ್ಣತಂಗಿ ಧಾರಾವಾಹಿಯಲ್ಲಿ ತಂಗಿ ತುಳಸಿಯ ಮದುವೆ ನಂತರ ಮೊದಲ ದೀಪಾವಳಿ. ಅಣ್ಣ ಶಿವಣ್ಣ, ತಂಗಿ-ಭಾವ ಇಬ್ಬರನ್ನೂ ಆಹ್ವಾನಿಸಿ ಸಂಭ್ರಮಿಸುತ್ತಾನೆ. ಕಾಣಿಕೆ ನೀಡುತ್ತಾನೆ. ಇದೇ ಕಾಣಿಕೆ ಮುಂದೆ ಊಹಿಸಲಾಗದ ಘಟನೆಗಳಿಗೆ ಕಾರಣವಾಗುತ್ತದೆ. ರಾತ್ರಿ 9:30೦ ಕ್ಕೆ ಪ್ರಸಾರವಾಗುವ ನಯನತಾರಾ ಧಾರಾವಾಹಿಯಲ್ಲಿ ಅವ್ವೆ ಭಗವತಿಯ ಮೈಮೇಲೆ ದೇವಿಯ ಆವಾಹನೆಯಾಗಿ ನಾಯಕಿ ನಯನಾಳ ಮನೆಯಲ್ಲಿ ಅವಳ ಅತ್ತೆ ಇಂದ್ರಾಣಿ ನಡೆಸುತ್ತಿರುವ ಅಕ್ರಮಗಳ ಬಗ್ಗೆ ಕಾರಣಿಕ ನುಡಿಯುತ್ತದೆ. ಪಾದಪೂಜೆ ಮಾಡಲು ನಿರಾಕರಿಸುವ ಇಂದ್ರಾಣಿಯ ಅಹಂಕಾರ ದಮನ ಮಾಡುತ್ತಾಳೆ ಭಗವತಿ. ಸೇವಂತಿ ಧಾರಾವಾಹಿಯಲ್ಲಿ ನಾಯಕಿ ಸೇವಂತಿಗೆ ಬದುಕಿಲ್ಲ ಎಂದು ತಿಳಿದುಕೊಂಡಿದ್ದ ತಾಯಿ ಸಿಕ್ಕ ಸಡಗರ. ಆದರೆ ತಾಯಿ ಶಾಂತಾ ಮಗಳನ್ನು ಗುರುತಿಸುತ್ತಿಲ್ಲ. ಬದಲಿಗೆ ದುಷ್ಟೆ ಪ್ರಿಯಾಳನ್ನು ಮಗಳು ಅಂತ ನಂಬಿಬಿಟ್ಟಿದ್ದಾಳೆ. ಈ ಸಿಕ್ಕನ್ನು ಬಿಡಿಸಿ ಪತಿ ಲಾಯರ್ಅರ್ಜುನ್ನೆರವಿನಿಂದ ಅಡೆತಡೆ ದಾಟಿ ತಾನೇ ನಿಜವಾದ ಮಗಳು ಎಂಬುದನ್ನು ಸಾಬೀತುಪಡಿಸುವುದು ಸೇವಂತಿ ಮುಂದಿರುವ ಸವಾಲು.
ಹಬ್ಬದ ಋತುವಿನಲ್ಲಿ ಉದಯ ಟಿವಿಯ ಎಲ್ಲಾ ಧಾರಾವಾಹಿಗಳಲ್ಲಿ ಒಂದಿಲ್ಲೊಂದು ವಿಶೇಷತೆಯಿದ್ದು ಮನೆಮಂದಿಯ ಸಂಭ್ರಮ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ ಎಂಬುದು ವಾಹಿನಿ ಮುಖ್ಯಸ್ಥರ ಅಭಿಪ್ರಾಯ.