ಇತ್ತೀಚಿನ ದಿನಗಳಲ್ಲಿ ಯುವಕರು ಹೇಗೆ ಹಾದಿ ತಪ್ಪುತ್ತಿದ್ದಾರೆ, ಅದರಿಂದ ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಶಿವ 143 ಚಿತ್ರದ ಮೂಲಕ ನಿರ್ದೇಶಕ ಅನಿಲ್ಕುಮಾರ್ ಹೇಳಿದ್ದಾರೆ. ಕನ್ನಡದ ಹೆಸರಾಂತ ವಿತರಕರೂ ಹಾಗೂ ನಿರ್ಮಾಪಕರೂ ಆದ ಜಯಣ್ಣ ಭೋಗೇಂದ್ರ ಜೋಡಿ ಜಯಣ್ಣ ಫಿಲಂಸ್ ಮೂಲಕ ತೆರೆಗೆ ತರುತ್ತಿದ್ದಾರೆ. ಅಲ್ಲದೆ ಈ ಚಿತ್ರದ ಮೂಲಕ ಡಾ.ರಾಜ್ಕುಮಾರ್ ಅವರ ಮೊಮ್ಮಗ ಧೀರನ್ ರಾಮ್ಕುಮಾರ್ ನಾಯಕನಾಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಆಗಸ್ಟ್ 26 ರಿಂದ ರಾಜ್ಯಾದ್ಯಂತ ೨೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶಿವನ ಆರ್ಭಟ ಶುರುವಾಗುತ್ತಿದೆ.
ಚಿತ್ರದ ಕುರಿತಂತೆ ಮಾತನಾಡಿರುವ ನಿರ್ದೇಶಕ ಅನಿಲ್ಕುಮಾರ್, ಇದು ರೌಡಿಸಂ ಕಥೆ ಅಲ್ಲ, ಪ್ಯೂರ್ ಲವ್ಸ್ಟೋರಿ ಅಥವಾ ಡಿಸ್ಟರ್ಬಿಂಗ್ ಲವ್ಸ್ಟೋರಿ. ಒಂದು ಲವ್ ಹೇಗೆ ಕಾಪಾಡಿಕೊಳ್ಳಬೇಕು, ಇಲ್ದಿದ್ರೆ ಏನಾಗುತ್ತೆ ಎಂಬುದನ್ನು ಹೇಳಿದ್ದೇವೆ, ತಮಿಳಿನ ಆರ್ ಎಕ್ಸ್ ಸೂರಿ ಚಿತ್ರದ ಒಂದು ಲೈನ್ ತಗೊಂಡು ನಮ್ಮ ಸ್ಟೈಲ್ ನಲ್ಲಿ ಚಿತ್ರವನ್ನು ಮಾಡಿದ್ದೇವೆ. ಚಾಕೊಲೆಟ್ ಬಾಯ್ ಥರ ಇದ್ದ ಧೀರನ್ ಅವರನ್ನು ಹೇಗೆ ಪ್ರಿಪೇರ್ ಮಾಡಬೇಕು ಅನ್ನೋದೇ ನನಗಿದ್ದ ಮೊದಲ ಚಾಲೆಂಜ್ ಆಗಿತ್ತು. ಆದರೆ ನಂತರ ಅವರಲ್ಲಿದ್ದ ಆಸಕ್ತಿ, ಡೆಡಿಕೇಶನ್ ತುಂಬಾ ಇಷ್ಟವಾಯಿತು. ಪಾತ್ರ ಮಾಡುವಾಗ ಆತ ಒಮ್ಮೆ ಕೆಸರಲ್ಲಿ ಮಲಗಿದ್ದಾನೆ, ಚರಂಡಿಯಲ್ಲಿ ಕೂತಿದ್ದಾನೆ. ದೊಡ್ಡ ಕುಟುಂಬದಿಂದ ಬಂದವನು ಎಂದು ಎಲ್ಲಿಯೂ ತೋರಿಸಿಕೊಳ್ಳದೆ ಆಸಕ್ತಿಯಿಂದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾನೆ. ಸಂಪೂರ್ಣವಾಗಿ ಯೂಥ್ ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಚಿತ್ರವಿದು.
ಒಬ್ಬ ಇನ್ನೋಸೆಂಟ್ ಹುಡುಗನ ಪ್ರೇಮಕಥೆಯಿದು. ಈಗಿನ ಕಾಲದ ಹುಡುಗ, ಹುಡುಗಿಯರು ಪ್ರೀತಿಯ ನೆಪದಲ್ಲಿ ಹೇಗೆ ದಾರಿ ತಪ್ಪುತ್ತಿದ್ದಾರೆ, ತಮ್ಮ ಜವಾಬ್ದಾರಿಗಳನ್ನು ಮರೆತರೆ ಮಂದೆ ಅವರ ಜೀವನ ಹೇಗೆ ಹಳಿ ತಪ್ಪುತ್ತದೆ ಎನ್ನುವುದೇ ಈ ಚಿತ್ರದ ಒನ್ಲೈನ್ ಸ್ಟೋರಿ. ಬೆಂಗಳೂರು, ಮೈಸೂರು, ಶ್ರೀರಂಗಪಟ್ಟಣ ಅಲ್ಲದೆ ಮೋಹನ್ ಬಿಕೆರೆ ಸ್ಟುಡಿಯೋದಲ್ಲಿ ೬೦ರಿಮದ ೬೫ ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಚಿತ್ರದ ಬಹುತೇಕ ಕಥೆ ರೂರಲ್ ಬ್ಯಾಕ್ಡಾಪ್ನಲ್ಲೇ ನಡೆಯಲಿದೆ. ವಿಶೇಷವಾಗಿ ಧೀರನ್ ಎರಡು ಶೇಡ್ ಪಾತ್ರ ಮಾಡಿದ್ದಾರೆ ಎಂದು ಹೇಳಿದರು. ನಾಯಕಿಯಾಗಿ ಟಗರು ಮಾನ್ವಿತಾ ಕಾಮತ್ ನಟಿಸಿದ್ದಾರೆ.
ಧೀರನ್ ಮಾತನಾಡಿ, ನಾನು ಮೊದಲ ಚಿತ್ರದಲ್ಲೇ ತುಂಬಾ ಚಾಲೆಂಜ್ಗಳನ್ನು ಫೇಸ್ ಮಾಡಬೇಕಾಗಿತ್ತು. ನನಗೂ ಪ್ರೇಮಕಥೆಯೊಂದಿಗೇ ತೆರೆಗೆ ಬರಬೇಕೆಂಬ ಆಸೆಯಿತ್ತು. ಆದರೆ ಈ ಸಬ್ಜೆಕ್ಟ್ ನೋಡಿದಾಗ ಯಾಕೆ ಇದನ್ನು ಮಾಡಬಾರದು ಎನಿಸಿ ಮಾಡಿದೆ. ಪಾತ್ರಕ್ಕಾಗಿ ಸಾಕಷ್ಟು ಪ್ರಿಪರೇಶನ್ ಮಾಡಿಕೊಂಡೆ, ಫಿಸಿಕಲ್ ಟ್ರಾನ್ಸ್ ಫಾರ್ಮೇಷನ್ ಇದೆ. ಡಯಟ್ ಕೂಡ ಮಾಡಿದ್ದೇನೆ ಎಂದಿದ್ದಾರೆ. ಇನ್ನು ಈ ಚಿತ್ರದಲ್ಲಿ ಒಟ್ಟು ೪ ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿರಿಯ ನಟ ಚರಣರಾಜ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.