ಸಾರಿಗೆ ಕ್ಷೇತ್ರ, ಪತ್ರಿಕೋದ್ಯಮ, ಮಾಧ್ಯಮ ಹಾಗು ಹಲವಾರು ವಿಭಾಗಗಳಲ್ಲಿ ಪರಿಣತಿ ಹೊಂದಿರುವ ಪ್ರತಿಷ್ಠಿತ ವಿ ಆರ್ ಎಲ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗು ಪ್ರೊಮೋಟರ್ ಆದ ಡಾ|| ಆನಂದ ಸಂಕೇಶ್ವರ ಅವರು ಇದೀಗ ವಿ ಆರ್ ಎಲ್ ಮೀಡಿಯಾ ಸಂಸ್ಥೆಯ ಅಡಿಯಲ್ಲಿ ``ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್” ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ.
ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಕನ್ನಡ ಸಿನಿಮಾ "ವಿಜಯಾನಂದ", ವಿಜಯ ಸಂಕೇಶ್ವರರ ಜೀವನಾಧಾರಿತ ಚಿತ್ರವಾಗಿದೆ. 1976 ರಲ್ಲಿ ಒಂದೇ ಟ್ರಕ್ನೊಂದಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿ ಇಂದು ಭಾರತದ ಅತಿದೊಡ್ಡ ಲಾಜಿಸ್ಟಿಕ್ಸ್ ಕಂಪನಿಯ ಮಾಲೀಕರಾಗಿರುವ ವಿಜಯ ಸಂಕೇಶ್ವರ ಅವರ ಅದ್ಭುತ ಮತ್ತು ರೋಮಾಂಚನಕಾರಿ ಕಥೆಯಾಗಿದೆ. ಈ ಕಥೆಯು ವಿಜಯ ಸಂಕೇಶ್ವರ ಮತ್ತು ಅವರ ಮಗ ಡಾ||ಆನಂದ ಸಂಕೇಶ್ವರ ಜೊತೆಗೆ ತಮ್ಮ ಪತ್ರಿಕೆ ಮತ್ತು ಮಾಧ್ಯಮ ಕ್ಷೇತ್ರಕ್ಕೆ ಹೆಸರುವಾಸಿಯಾದ ಯಶಸ್ಸಿನ ಪ್ರಯಾಣವನ್ನು ಒಳಗೊಂಡಿದೆ.
ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಡಾ|| ಆನಂದ ಸಂಕೇಶ್ವರ ಅವರು ನಿರ್ಮಿಸುತ್ತಿರುವ "ವಿಜಯಾನಂದ" ಚಿತ್ರದ ಮೊದಲ ಅಧಿಕೃತ ಟೀಸರನ್ನು ಚಿತ್ರ ತಂಡವು 2 ನೇ ತಾರೀಖು ಆಗಸ್ಟ್, 2022 ರಂದು ಬೆಳಿಗ್ಗೆ 10:05 ಕ್ಕೆ ಬಿಡುಗಡೆ ಮಾಡುತ್ತಿದೆ.
ಈ ಚಿತ್ರವು ಕನ್ನಡ ಚಲನಚಿತ್ರೋದ್ಯಮದ ಅಫೀಷಿಯಲ್ ಮತ್ತು ಕಮರ್ಷಿಯಲ್ ಜೀವನಚರಿತ್ರೆಯಾಗಲಿದ್ದು, ಪ್ರತಿಷ್ಠಿತ ದಕ್ಷಿಣ ಭಾರತದ ಭಾಷೆಗಳಾದ ತಮಿಳು, ತೆಲುಗು ಮತ್ತು ಮಳಯಾಳಂ ಭಾಷೆಗಳಿಗೆ ಡಬ್ ಆಗಲಿದೆ.
ಈ ಹಿಂದೆ ``ಟ್ರಂಕ್`` ಎಂಬ ಹಾರರ್ ಥ್ರಿಲ್ಲರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಮಹಿಳಾ ನಿರ್ದೇಶಕಿ ರಿಷಿಕಾ ಶರ್ಮಾರವರು ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. "ವಿಜಯಾನಂದ" ಸಿನಿಮಾಗೆ ವಿಜಯ ಸಂಕೇಶ್ವರ ಅವರ ಪಾತ್ರಕ್ಕೆ "ಟ್ರಂಕ್" ಚಿತ್ರದಲ್ಲಿ ನಾಯಕ ನಟರಾಗಿದ್ದ ನಿಹಾಲ್ ಬಣ್ಣ ಹಚ್ಚಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಅನಂತನಾಗ್, ವಿನಯಾ ಪ್ರಸಾದ್, ವಿ ರವಿಚಂದ್ರನ್, ಪ್ರಕಾಶ್ ಬೆಳವಾಡಿ, ಅನೀಶ್ ಕುರುವಿಲ್ಲಾ, ಸಿರಿ ಪ್ರಹ್ಲಾದ್ ಮತ್ತು ಭರತ್ ಬೋಪಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತೀಯ ಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ (ಬೆಂಗಳೂರು ಡೇಸ್, ಉಸ್ತಾದ್ ಹೋಟೆಲ್ , ಗೀತ ಗೋವಿಂದಂ, ಮೋಸ್ಟ ಎಲಿಜಿಬಲ್ ಬ್ಯಾಚುಲರ್ ) ``ವಿಜಯಾನಂದ`` ಚಿತ್ರಕ್ಕೆ ಹಿನ್ನಲೆ ಸಂಗೀತ ಮತ್ತು ಸಂಗೀತ ನಿರ್ದೇಶಕರಾಗಿ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ರಘು ನಿಡುವಳ್ಳಿ
(ಅಂಜನಿಪುತ್ರ, ಸೀತಾರಾಮ ಕಲ್ಯಾಣ) ಸಂಭಾಷಣೆ ಬರೆದಿದ್ದು, ರವಿ ವರ್ಮಾ (ವಕೀಲ್ ಸಾಬ್, ಊಪಿರಿ, ಸ್ಕೆಚ್, ರಯೀಸ್, ರಾಜಕುಮಾರ) ಸಾಹಸ ನಿರ್ದೇಶಕರಾಗಿ ಕೈ ಜೋಡಿಸಿದ್ದಾರೆ. ಕೀರ್ತನ್ ಪೂಜಾರಿ (ಮಹಿರಾ, ಕಡಲ ತೀರದ ಭಾರ್ಗವ, 0-41*) ಸಿನಿಮಾಟೋಗ್ರಫಿಗೆ ಮುಂದಾಳತ್ವ ವಹಿಸಿದ್ದಾರೆ.. ಹೇಮಂತ್ ಕುಮಾರ್ ಡಿ (ಟ್ರಂಕ್ ಖ್ಯಾತಿಯ) ಈ ಚಿತ್ರದ ಸಂಕಲನಕಾರರಾಗಿದ್ದಾರೆ. ಪ್ರಕಾಶ್ ಗೋಕಾಕ್ (ಬಿಚ್ಚುಗತ್ತಿ, ರಾಜಧಾನಿ, ವೇದ) ಅವರು ಮೇಕಪ್ ಮತ್ತು ಸ್ಟೈಲಿಂಗ್ ಮಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಈ ಹಿಂದೆ ನಮ್ಮ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿ, ಹರಸಿ, ಹಾರೈಸಿದ ಪತ್ರಿಕಾ ಮಾಧ್ಯಮ ಹಾಗು ಟಿ ವಿ ಮಾಧ್ಯಮದವರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಾ, ``ವಿಜಯಾನಂದ`` ಚಿತ್ರಕ್ಕೆ ಪ್ರಚಾರ ಮತ್ತು ಪ್ರೋತ್ಸಾಹ ನೀಡಲು ವಿನಂತಿಸುತ್ತೇವೆ.
ಧನ್ಯವಾದಗಳು
ವಿಜಯಾನಂದ ಚಿತ್ರತಂಡ