ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್ ಜೋಡಿಯ `ತೋತಾಪುರಿ` ಸೆಪ್ಟೆಂಬರ್ 30ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಇದೇ ಜೋಡಿ ಈ ಹಿಂದೆ `ನೀರ್ ದೋಸೆ` ಮೂಲಕ ಗಮನ ಸೆಳೆದಿತ್ತು. ಇದೀಗ `ತೋತಾಪುರಿ` ಮೂಲಕ ಕಮಾಲ್ ಮಾಡಲು ಮುಂದಾಗಿದೆ. ತೋತಾಪುರಿ ಎರಡು ಭಾಗಗಳಲ್ಲಿ ತಯಾರಾಗಿದ್ದು, ನೂರಾರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕಾಮಿಡಿ ಸಿನಿಮಾವೊಂದಕ್ಕೆ ಈ ಪರಿ ಶೂಟಿಂಗ್ ಮಾಡಿರುವುದು ಒಂದೆಡೆಯಾದರೆ, ಜಗ್ಗೇಶ್ ನಟಿಸಿರುವ ಸಿನಿಮಾಗಳ ಪೈಕಿ ತೋತಾಪುರಿ ಬಿಗ್ ಬಜೆಟ್ ಸಿನಿಮಾ ಎಂಬುದು ಗಮನಾರ್ಹ. ಹಾಗೆಯೇ ಚಿತ್ರದಲ್ಲಿ ಸಾಕಷ್ಟು ತಾರಾಸಮೂಹವೇ ಇದೆ ಎಂಬುದು ಮತ್ತೊಂದು ಗಮನಾರ್ಹ ವಿಷಯ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ವೀಣಾ ಸುಂದರ್, ದತ್ತಣ್ಣ, ಹೇಮಾದತ್ ಸೇರಿದಂತೆ ಅನೇಕ ಕಲಾವಿದರು ತಾರಾಗಣದಲ್ಲಿದ್ದಾರೆ.
ಮಹಿಳೆಯರು ಹಾಗೂ ಕುಟುಂಬವರ್ಗ ವೀಕ್ಷಿಸಿದ ನೀರ್ ದೋಸೆ ಬಾಕ್ಸಾಫೀಸ್`ನಲ್ಲೂ ದೊಡ್ಡ ಮಟ್ಟದಲ್ಲಿ ದಾಖಲೆ ಮಾಡಿದೆ. ಇನ್ನು ನೀರ್ ದೋಸೆ ಹಾಗೂ ತೋತಾಪುರಿ ಇವರಿಬ್ಬರ ಕಾಂಬಿನೇಷನ್ ಎಂಬುದು ಒಂದೆಡೆಯಾದರೆ, ನೀರ್ ದೋಸೆ ರಿಲೀಸ್ ಆಗಿದ್ದು ದಸರಾ ವೇಳೆಯಲ್ಲಿ. ಈಗ ತೋತಾಪುರಿ ಸಹ ದಸರಾ ವೇಳೆಗೆ ಕಂಗೊಳಿಸಲು ಸಜ್ಜಾಗಿದೆ. ಸೆಪ್ಟೆಂಬರ್ 2ರಂದು ನೀರ್ ದೋಸೆ ಬಿಡುಗಡೆಯಾಗಿ ರಾಜ್ಯಾದ್ಯಂತ ಸಖತ್ ಕಮಾಲ್ ಮಾಡಿತ್ತು. ಇದೀಗ ಸೆಪ್ಟೆಂಬರ್ 30ರಂದು ತೋತಾಪುರಿ ವಿಶ್ವದಾದ್ಯಂತ ರಂಗೇರಲು ತಯಾರಿ ನಡೆಸಿದೆ ಚಿತ್ರತಂಡ.
ಸ್ಯಾಂಡಲ್`ವುಡ್`ನಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಕೆ.ಎ.ಸುರೇಶ್ ತೋತಾಪುರಿ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ಎರಡನೇ ಮದುವೆ, ಗೋವಿಂದಾಯ ನಮಃ, ಶ್ರಾವಣಿ ಸುಬ್ರಮಣ್ಯ, ಆರ್ ಎಕ್ಸ್ ಸೂರಿ, ಶಿವಲಿಂಗ, ರಾಜು ಕನ್ನಡ ಮೀಡಿಯಂ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆ.ಎ.ಸುರೇಶ್, ತೋತಾಪುರಿ ಸಿನಿಮಾವನ್ನು ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆಯಿರುವ ಚಿತ್ರದ ಹಾಡಿಗೆ ಈಗಾಗಲೇ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದಾಗಲೇ 200 ಮಿಲಿಯನ್ ಹಿಟ್ಸ್ ದಾಖಲಿಸಿದ ಖುಷಿಯಲ್ಲಿದೆ.