ಪರಂವಃ ಸ್ಟುಡಿಯೋಸ್​ ನಿರ್ಮಾಣದ ಹೊಸ ಚಿತ್ರ 11ರ ಹರೆಯದ ಬಾಲಕನ ಕಥೆ `ಮಿಥ್ಯ`
Posted date: 11 Thu, Aug 2022 08:44:35 AM
ಚಿತ್ರರಂಗ ಎಂದರೆ ಎಲ್ಲ ರೀತಿಯ ಸಿನಿಮಾಗಳನ್ನೂ ಮಾಡಬೇಕು. ಹೊಸ ಶೈಲಿಯ ಕಥೆಗಳನ್ನು, ಹೊಸ ಆಲೋಚನೆಗಳನ್ನು ಬರಮಾಡಿಕೊಳ್ಳಬೇಕು. ಹೊಸ ಯೋಚನೆಗಳಿರುವ ಕಥೆಗಾರರನ್ನು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಪರಂವಃ ಸ್ಟುಡಿಯೋಸ್​ ಹೆಜ್ಜೆ ಇಟ್ಟಿದ್ದು, `ಮಿಥ್ಯ` ಅಂಥದ್ದೊಂದು ವಿನೂತನ ಪ್ರಯತ್ನವಾಗಲಿದೆ.
`ಮಿಥ್ಯ`, ರಕ್ಷಿತ್​ ಶೆಟ್ಟಿ ನಿರ್ಮಾಣದ ಹೊಸ ಚಿತ್ರ. ಈ ಚಿತ್ರದ ಮೂಲಕ ಸುಮಂತ್​ ಭಟ್​ ಸ್ವತಂತ್ರ ನಿರ್ದೇಶಕರಾಗಿ ಕಾಲಿಡುತ್ತಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ 11 ವರ್ಷದ ಬಾಲಕನ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ. ಅವನ ನೋವು ಮತ್ತು ವಿಮೋಚನೆಯ ಕಥೆಯನ್ನು ಹೇಳವ ಪ್ರಯತ್ನ ಮಾಡುತ್ತಿದ್ದಾರೆ.
 
ತಂದೆ-ತಾಯಿಯ ನಿಧನದ ನಂತರ, ಅವರ ನೆನಪುಗಳಿಂದ ಹೊರಬರಲಾರದ ಪುಟ್ಟ ಬಾಲಕನೊಬ್ಬ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವೇ ಈ `ಮಿಥ್ಯ`.

ಮೂಲತಃ ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದ ಸುಮಂತ್​ ಭಟ್​ಗೆ ಸಿನಿಮಾ ಎನ್ನುವುದು ಪ್ಯಾಶನ್​. ಇದಕ್ಕೂ ಮುನ್ನ ಪರಂವಃ ಸ್ಟುಡಿಯೋಸ್​ ನಿರ್ಮಾಣದ `ಏಕಂ` ಎಂಬ ವೆಬ್​ಸೀರೀಸ್​ನ ಏಳು ಕಂತುಗಳಲ್ಲಿ, ನಾಲ್ಕು ಕಂತುಗಳನ್ನು ಬರೆದು ನಿರ್ದೇಶಿಸಿದವರು ಅವರು. ಜತೆಗೆ ಪರಂವಃ ಕಥಾತಂಡದ ಸಕ್ರಿಯರಾಗಿ ಗುರುತಿಸಿಕೊಂಡವರು. ಈಗ ಅವರು ಸ್ವತಂತ್ರ ನಿರ್ದೇಶಕರಾಗಿ `ಮಿಥ್ಯ` ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು`ಮತ್ತು `ವಿಕ್ರಾಂತ್​ ರೋಣ` ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟ ಆತಿಶ್​ ಶೆಟ್ಟಿ, ಇಲ್ಲಿ ಮಿಥುನ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಅವನೊಂದಿಗೆ ಪ್ರಕಾಶ್​ ತುಮ್ಮಿನಾಡು, ರೂಪಾ ವರ್ಕಾಡಿ ಮುಂತಾದವರು ನಟಿಸುತ್ತಿದ್ದಾರೆ. 

`ಮಿಥ್ಯ` ಚಿತ್ರಕ್ಕೆ ಉದಿತ್​ ಖುರಾನ ಅವರ ಛಾಯಾಗ್ರಹಣವಿದ್ದು, ಮಿಥುನ್​ ಮುಕುಂದನ್​ ಅವರ ಸಂಗೀತವಿದೆ. ಭುವನೇಶ್​ ಮಣಿವಣ್ಣನ್​ ಸಂಕಲನಕಾರರಾಗಿ, ಶ್ರೇಯಾಂಕ್​ ನಂಜಪ್ಪ ಸೌಂಡ್​ ಡಿಸೈನರ್​ ಆಗಿ ಕಾರ್ಯನಿರ್ವಹಿಸಲಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed