ದರ್ಶನ್ ಅವರ ಕ್ರಾಂತಿಗೆ ಇಂದು ಮುಹೂರ್ತ ನೆರವೇರಿತು
Posted date: 16 Sat, Oct 2021 12:07:00 PM
ದರ್ಶನ್ ನಟನೆಯ ಕ್ರಾಂತಿ ಸಿನಿಮಾದ ಮುಹೂರ್ತ ಇಂದು ಬೆಂಗಳೂರಿನ ಚಂದ್ರಾ ಲೇಔಟ್ ನ ಗಣೇಶ ಮಂದಿರದಲ್ಲಿ ನಡೆಯಿತು.
ಮುಹೂರ್ತ ಸಮಾರಂಭವನ್ನು ಸರಳವಾಗಿ ಆಯೋಜಿಸಿತ್ತು ಚಿತ್ರತಂಡ. ನಟಿ, ಸಂಸದೆ ಸುಮಲತಾ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ರಚಿತಾ ರಾಮ್, ಅಭಿಷೇಕ್ ಅಂಬರೀಶ್ ಹೀಗೆ ಸಿನಿಮಾ ರಂಗದ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು.
ಸುಮಲತಾ ಅಂಬರೀಶ್ ಅವರು ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ತಾವೂ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯವನ್ನೂ ಹಂಚಿಕೊಂಡರು. ಹಲವು ವರ್ಷಗಳ ನಂತರ ದರ್ಶನ್ ಜತೆ ನಟಿಸುತ್ತಿರುವುದು ಖುಷಿ ತಂದಿದೆ ಅಂದರು.
ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ನಟಿಸುತ್ತಿದ್ದಾರೆ. ದರ್ಶನ್ ಅವರ ತಂದೆಯ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ರಚಿತಾ ರಾಮ್ ಸಿನಿಮಾದ ನಾಯಕಿ. ದರ್ಶನ್ ಮತ್ತು ರಚಿತಾ ರಾಮ್ ಅವರ ಕಾಂಬಿನೇಷನ್ ನ ಮೂರನೇ ಸಿನಿಮಾ ಇದಾಗಿದೆ. 
ಅಕ್ಷರ ಕ್ರಾಂತಿಗಾಗಿ ಹೋರಾಡುವ ನಾಯಕನಾಗಿ ದರ್ಶನ್ ಕಾಣಿಸಿಕೊಳ್ಳುತ್ತಿರುವುದು ಸಿನಿಮಾದ ಮತ್ತೊಂದು ವಿಶೇಷ.
ಕ್ರಾಂತಿ ದರ್ಶನ್ ಅವರ 55ನೇ ಚಿತ್ರ. ಮೀಡಿಯಾ ಹೌಸ್ ಸ್ಟುಡಿಯೋ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ದರ್ಶನ್ ಅವರ 2 ನೇ ಸಿನಿಮಾ. ಯಜಮಾನ ಚಿತ್ರದ ನಂತರ ಶೈಲಜಾ ನಾಗ್ ಮತ್ತು ಬಿ.ಸುರೇಶ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಯಜಮಾನ ಸಿನಿಮಾ ಮೂಲಕ ನಿರ್ದೇಶಕರಾದ, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಈ ಸಿನಿಮಾಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜತೆಗೆ ಸಂಗೀತ ನಿರ್ದೇಶನ ಮತ್ತು ಸ್ಕ್ರಿಪ್ಟ್ ಕೂಡ ವಿ.ಹರಿಕೃಷ್ಣ ಅವರದ್ದೆ. 
ಇದೇ ತಿಂಗಳು ಕೊನೆಯ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿತ್ರೀಕರಣಕ್ಕಾಗಿ ಬೃಹತ್ ಸೆಟ್ ಗಳು ಸಿದ್ಧವಾಗಿವೆ‌.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed