ಶ್ರಾವಣ ಮಾಸದ ಶುಕ್ರವಾರ ಮಹಾಲಕ್ಷ್ಮಿಗೆ ಅತ್ಯಂತ ಪ್ರಿಯವಾದ ವಾರ. ವರಮಹಾಲಕ್ಷ್ಮೀ ಹಬ್ಬ ಕೂಡ ಇದೇ ಮಾಸದಲ್ಲಿ ಬರುತ್ತದೆ. ಇಂತಹ ಶುಭ ಸಂದರ್ಭದಲ್ಲಿ ದರ್ಪಣ್ ಕ್ರಿಯೇಷನ್ಸ್ ಲಾಂಛನದಲ್ಲಿ ಉಮಾ ರೋಹಿತ್ ನಿರ್ಮಿಸುತ್ತಿರುವ ``ಲಕ್ಷ್ಮೀ ಪುತ್ರ`` ಚಿತ್ರ ಆರಂಭವಾಗಿದೆ. ರೋಹಿತ್ ಅರುಣ್ ಈ ಚಿತ್ರದ ನಿರ್ದೇಶಕರು.
ಮಹಾಲಕ್ಷ್ಮಿಪುರದ ಸಲ್ಲಾಪುರದಮ್ಮನ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನೆರವೇರಿತು. ಮೊದಲ ದೃಶ್ಯಕ್ಕೆ ಇಂದ್ರಜಿತ್ ಲಂಕೇಶ್``ಆರಂಭ ಫಲಕ ತೋರಿದರು. ಧನರಾಜ್ ಬಾಬು ಕ್ಯಾಮೆರಾ ಚಾಲನೆ ಮಾಡಿದರು ಹಾಗೂ ಚಾಮರಾಜ್ ಮಾಸ್ಟರ್ ಮೊದಲ ಸನ್ನಿವೇಶಕ್ಕೆ ಆಕ್ಷನ್ ಕಟ್ ಹೇಳಿದರು.
ಚಾಮರಾಜನಗರ ಜಿಲ್ಲೆಯ ಸುಂದರ ರಮಣೀಯ ಹಳ್ಳಿಯೊಂದರಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.
ಚಂದನವನದಲ್ಲಿ ನೃತ್ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ರೋಹಿತ್ ಅರುಣ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ಶ್ರೇಯಸ್ ಚಿಂಗಾ ಈ ಚಿತ್ರದ ನಾಯಕನಾಗಿದ್ದು, ಈ ಹಿಂದೆ ``ಡೇವಿಡ್``ಮತ್ತು ``ದಿ ವ್ಯಾಕಂಟ್ ಹೌಸ್`` ಚಿತ್ರಗಳಲ್ಲಿ ನಟಿಸಿದ್ದಾರೆ. ಎರಡೂ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಲಕ್ಷ್ಮೀಪುತ್ರ ಅವರು ನಾಯಕನಾಗಿ ನಟಿಸುತ್ತಿರುವ 4ನೇ ಚಿತ್ರ.
ಮತ್ತೊಬ್ಬ ನಾಯಕನಾಗಿ ವಿನಯ್ ಕುಮಾರ್ ಅಭಿನಯಿಸುತ್ತಿದ್ದಾರೆ. ಇವರು ಸಹ ನೃತ್ಯಗಾರರಾಗಿದ್ದಾರೆ ಹಾಗೂ ಜನಪ್ರಿಯ ಶೋ DKD (ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್) ಸೀಸನ್ 1 ರ ರನ್ನರ್ ಅಪ್ ಆಗಿದ್ದಾರೆ.
ಶ್ರೇಯಸ್ ಚಿಂಗಾ ಮತ್ತು ವಿನಯ್ ಕುಮಾರ್ ಈ ಚಿತ್ರದಲ್ಲಿ ``ಶಿವ`` ಮತ್ತು ``ಮಹಾದೇವ`` ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಸಹೋದರರಾಗೂ ಕಾಣಿಸಿಕೊಳ್ಳುತ್ತಿದ್ದಾರೆ.
ಇತಿ ಆಚಾರ್ಯ, ಅಮಿತಾ ರಂಗನಾಥ್ ಹಾಗೂ ಭೂಮಿಕಾ ಗೌಡ ಈ ಚಿತ್ರದ ನಾಯಕಿಯರು. ಭೂಮಿಕಾ ಗೌಡ ಅವರಿಗೆ ಇದು ಚೊಚ್ಚಲ ಚಿತ್ರ.
ಸಂಜೀವ ರೆಡ್ಡಿ ಸಂಕಲನವಿರುವ ಈ ಚಿತ್ರಕ್ಕೆ ಶ್ಯಾಮ್ ಸಾಲ್ವಿನ್ ಅವರ ಛಾಯಾಗ್ರಹಣವಿದೆ. ಶ್ರೀವತ್ಸ ಸಂಗೀತ ನಿರ್ದೇಶನ, ಚೇತನ್ ಡಿಸೋಜ ಮತ್ತು ರವಿ ಜಮಖಂಡಿ ಸಾಹಸ ನಿರ್ದೇಶನ ಹಾಗೂ ರೋಹಿತ್ ಅರುಣ್ ಮತ್ತು ಚಾಮರಾಜ್ ಮಾಸ್ಟರ್ ಅವರ ನೃತ್ಯ ನಿರ್ದೇಶನ ``ಲಕ್ಷ್ಮೀ ಪುತ್ರ`` ಚಿತ್ರಕ್ಕಿದೆ.